ಬಂಟ್ವಾಳ: ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬಸ್’ನಿಂದ ಹಾರಿದ ಆರೋಪಿ
ಬಂಟ್ಚಾಳ;ಕಳ್ಳತನ ಪ್ರಕರಣದ ಆರೋಪಿಯನ್ನು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಂಗಳೂರು ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಪೊಲೀಸರನ್ನು ತಳ್ಳಿ ಬಸ್ ನಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಾರ್ವಜನಿಕರ ಸಹಾಯದಿಂದ ಪೊಲೀಸರು ಆತನನ್ನು ಹಿಡಿದು ಜೈಲಿಗಟ್ಟಿದ ಘಟನೆ ನವಂಬರ್ 2ರಂದು ಸಂಜೆ ವರದಿಯಾಗಿದೆ.
![](http://newsbites.in/wp-content/uploads/2022/11/IMG-20221103-WA0027.jpg)
2003ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕಳ್ಳಿಗೆ ನಿವಾಸಿ ಗಿರೀಶ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯದ ಅದೇಶದಂತೆ ಪೋಲೀಸರು ಈತನನ್ನು ಪತ್ತೆ ಹಚ್ಚಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಸರ್ಕಾರಿ ಬಸ್ ನಲ್ಲಿ ಇಬ್ಬರು ಪೋಲೀಸರು ಬಿ ಸಿ ರೋಡಿನಿಂದ ಮಂಗಳೂರಿಗೆ ಸುಮಾರು 6.30 ರ ಸಮಯದಲ್ಲಿ ಕರೆದುಕೊಂಡು ಹೋಗುವ ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಬಸ್ ನಿಧಾನವಾಗುತ್ತಿದ್ದಂತೆ, ಪೋಲೀಸರನ್ನು ಬಸ್ ನೊಳಗೆ ದೂಡಿ ಹಾಕಿ ಬಸ್ ನಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ಪೋಲೀಸರು ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.