ಪುತ್ತೂರು: ಹಿಂದೂ ಯುವಕನಿಂದ ಹಿಂದೂ ಯುವತಿಗೆ ಅನ್ಯಾಯವಾಗಿರುವಾಗ ಮುಖಂಡರು, ಸಂಘಟನೆಯವರು, ಯಾಕೆ ಮಾತನಾಡುತ್ತಿಲ್ಲ -ಆಲಿ ಪ್ರಶ್ನೆ
ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಯುವಕನಿಂದಲೇ ಹಿಂದೂ ಯುವತಿಗೆ ಅನ್ಯಾಯವಾಗಿದ್ದರೂ ಒಬ್ಬರೂ ಹಿಂದು ಮುಖಂಡರು, ಸಂಘಟನೆಯವರು ಮಾತನಾಡುತ್ತಿಲ್ಲ. ಒಂದು ವೇಳೆ ಆರೋಪಿಯ ಸ್ಥಾನದಲ್ಲಿ ಬೇರೆ ಧರ್ಮದ ಯುವಕ ಇರುತ್ತಿದ್ದರೆ ಇಡೀ ಪುತ್ತೂರಿಗೆ ಬೆಂಕಿ ಹಾಕುತ್ತಿದ್ದರು. ಪ್ರಾಣಿಗಳಿಗೆ ಅನ್ಯಾಯವಾದಾಗ ಪ್ರಾಣಿ ದಯಾಸಂಘವಿದೆ.ಆದರೆ ಮನುಷ್ಯನಿಗೆ ಅನ್ಯಾಯವಾದಾಗ ಯಾರೂ ಇಲ್ಲ ಯಾಕೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ಮುಖಂಡನ ಮಗನೇ ಆರೋಪಿಯಾಗಿದ್ದಾನೆ. ಅನ್ಯಾಯಕ್ಕೆ ಒಳಗಾದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದಾಳೆ. ಆರಂಭದಲ್ಲಿ ಮದುವೆಗೆ ಒಪ್ಪಿಕೊಂಡ ಆರೋಪಿ ಈಗ ಮದುವೆಯಾಗದೆ ತಲೆ ಮರೆಸಿಕೊಂಡಿದ್ದಾನೆ.ಈ ಪ್ರಕರಣದಲ್ಲಿ ಯುವಕ ಹೇಗೆ ತಪ್ಪಿತಸ್ಥನೋ ಆತನ ತಂದೆ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜಕ್ಕೆ ಉತ್ತರ ನೀಡಬೇಕಾಗಿದೆ ಎಂದ ಆಲಿಯವರು,ಹುಡುಗ ನಿಜವಾಗಿ ಲವ್ ಮಾಡುತ್ತಿದ್ದರೆ ಮದುವೆ ಆಗುತ್ತಿದ್ದ. ಅದರೆ ಇದು ಅತ್ಯಾಚಾರ ಕೃತ್ಯ ಎಂದು ಅವರು ಆರೋಪಿಸಿದರು.
ಇವತ್ತು ಅನ್ಯಕೋಮಿನ ಯುವಕನ ಪ್ರಕರಣ ಆಗುತ್ತಿದ್ದರೆ ಇಡೀ ಊರಲ್ಲೇ ಪ್ರತಿಭಟನೆ ನಡೆಯುತ್ತಿತ್ತು. ಡಾ.ಆಶಾ ಪುತ್ತೂರಾಯ ಅವರ ವಿಚಾರದಲ್ಲಿ ಪ್ರತಿಭಟನೆ ಮಾಡಿದ ಅರುಣ್ ಕುಮಾರ್ ಪುತ್ತಿಲ, ಮುರಳಿ ಹಸಂತಡ್ಕ ಇವತ್ತು ಎಲ್ಲಿ ದ್ದಾರೆ. ಯಾಕೆ ಮಾತನಾಡುತ್ತಿಲ್ಲ? ಕಾಂಗ್ರೆಸ್ ಜನಪ್ರತಿನಿಧಿಗಳು ಏನಾದರೂ ಮಾಡುತ್ತಿದ್ದರೆ ಇವತ್ತು ಬೆಂಕಿ ಹಾಕುತ್ತಿದ್ದರು. ಇವತ್ತು ಹಿಂದು ಯುವತಿಗೆ ಅನ್ಯಾಯವಾದಾಗ ಬಿಜೆಪಿಯ ಮಹಿಳಾ ಮೋರ್ಚಾ, ಸಂಘ ಪರಿವಾರದ ಸಂಘಟನೆಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದ ಆಲಿಯವರು, ಇವತ್ತು ಕಾಂಗ್ರೆಸ್ನವರು ಏನಾದರೂ ಇದೇ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದರೆ ಬೇರೆಯೇ ರೀತಿ ಆಗುತ್ತಿತ್ತು, ಬಿಜೆಪಿ ಸಂಘ ಪರಿವಾರ ರಾಜಕೀಯ ಲಾಭಕ್ಕಾಗಿ ಮಾತ್ರ ಇರುವುದು. ಹೆಣ್ಣನ್ನು ಮಾತೆ ಎನ್ನುವವರ, ಸಂಸ್ಕಾರ-ಸಂಸ್ಕೃತಿ ಎನ್ನುವವರ ವಲಯದಲ್ಲೇ ಒಬ್ಬಳು ಹೆಣ್ಣಿಗೆ ಘೋರ ಅನ್ಯಾಯ ಆಗಿದೆ.ಬೇಟಿ ಬಚಾವೋ ಎನ್ನುವವರು ಏನು ಹೇಳುತ್ತಾರೆ? ಎಂದು ಹೆಚ್.ಮಹಮ್ಮದ್ ಅಲಿ ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಕಾರ್ಯದರ್ಶಿ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.