ಮೂಲ್ಕಿಯಲ್ಲಿ ನಡೆದ ಅಬ್ದುಲ್ ಲತೀಫ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: ಸುಮಾರು ಮೂರು ವರ್ಷಗಳಿಂದ
ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
2020ರಲ್ಲಿ ಮೂಲ್ಕಿಯಲ್ಲಿ ನಡೆದಿದ್ದ ಅಬ್ದುಲ್ ಲತೀಫ್ ಕೊಲೆ ಪ್ರಕರಣದ ಆರೋಪಿ ಮೊಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂಬಾತನನ್ನು ಪೊಲೀಸರು ಜೂ.30ರಂದು ಬಂಧಿಸಿದ್ದಾರೆ.

2020ರ ಜೂನ್ 5ರಂದು ಮೂಲ್ಕಿ ಹೆದ್ದಾರಿ ಬಳಿ ಹಾಡಹಗಲಿನಲ್ಲಿ ಅಬ್ದುಲ್ ಲತೀಫ್ ಎಂಬವರನ್ನು ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಫಾ ಮತ್ತು ಇತರರು ಒಟ್ಟು 10 ಜನ ಸೇರಿ ಕೊಲೆ ಮಾಡಿದ್ದು, ಎಲ್ಲಾ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪಕ್ಷಿಕರೆ ಕೆಮ್ರಾಲ್ ನಿವಾಸಿ ಮೊಹಮ್ಮದ್ ಮುಸ್ತಫಾ ಎಂಬಾತನಿಗೆ ಉಚ್ಚ ನ್ಯಾಯಾಲಯದಲ್ಲಿ ಅದೇ ವರ್ಷದ ಅ.19 ರಂದು ಜಾಮೀನು ಸಿಕ್ಕಿತ್ತು. ಆದರೆ 2022ರ ಏಪ್ರಿಲ್ 22ರಂದು ಸರ್ವೋಚ್ಚ ನ್ಯಾಯಾಲಯವು ಜಾಮೀನು ರದ್ದು ಮಾಡಿರುತ್ತದೆ. ಆದರೆ ಶರಣಾಗದ ಆರೋಪಿ ಮೊಹಮ್ಮದ್ ಮುಸ್ತಫಾ ತಲೆಮರೆಸಿಕೊಂಡು ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ.
ನಕಲಿ ಪಾಸ್ಪೋರ್ಟ್ ಬಳಸಿದ್ದ ಮುಸ್ತಫಾ ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ನಂತರ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿದ್ದ. ಜೂ.30ರಂದು ಈತನನ್ನು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿದ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಈತನ ವಿರುದ್ಧ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಗ್ಗೆ ಮತ್ತು ವಿದೇಶ ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಪ್ರಕರಣವನ್ನು ಮೂಲ್ಕಿ ಠಾಣೆಯಲ್ಲಿ ದಾಖಲಿಸಲಾಗಿದೆ. ನಕಲಿ ಪಾಸ್ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟು ಬಾಕಿಯಿದೆ