ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ ಕಾಲೇಜಿನಲ್ಲಿ ಮಹಿಳಾ ದೌಜನ್ಯ ತಡೆ ದಿನದ ಅಂಗವಾಗಿ ಕಾನೂನು ಮಾಹಿತಿ ಕಾರ್ಯಗಾರ
ಪುತ್ತೂರು: ಮುಕ್ರಂಪಾಡಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು,ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು,ಮಹಿಳಾ ಠಾಣೆ ಪುತ್ತೂರು,ಅಂಚೆ ಇಲಾಖೆ ಪುತ್ತೂರು,ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಇವರ ಸ೦ಯುಕ್ತ ಆಶ್ರಯದಲ್ಲಿ ಶಿಕ್ಷಣ ಕೇಂದ್ರಗಳ ಒಕ್ಕೂಟ (ರಿ) ದ.ಕ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು,ಮಕ್ಕಳ ಹಕ್ಕುಗಳ ಮಾಸೋತ್ಸವದ ಪ್ರಯುಕ್ತ ಮಹಿಳಾ ದೌರ್ಜನ್ಯ ತಡೆ ದಿನದ ಅಂಗವಾಗಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಕಾರ್ಯದರ್ಶಿ ಮಮತಾ ಸುವರ್ಣರವರು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಮಹಿಳಾ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭವಾನಿಯವರು ಮಾತನಾಡಿ, ಮಹಿಳೆಯರು ಯಾವುದೇ ವಿಷಯಕ್ಕೆ ಅಂಜದೆ ಧೈರ್ಯವನ್ನು ಪಾಲಿಸಿಕೊಂಡು, ಸಮಸ್ಯೆ ಬಂದಾಗ ಅದನ್ನ ಮನೆಯವರು, ಅಧ್ಯಾಪಕರು ಅಥವಾ ಪೋಲೀಸರೊಂದಿಗೆ ಸಮಸ್ಯೆ ಬಗೆಹರಿಸಬೇಕು ಎಂದರು. ಸಮಾಜದಲ್ಲಿ ಮಹಿಳೆಯರಿಗೆ ದೌರ್ಜನ್ಯ ನಡೆಯದಂತೆ ಜಾಗ್ರತೆ ವಹಿಸುವ ಬಗ್ಗೆ ಪೋಕ್ಸೋ ಆಕ್ಟ್ ,ಮಹಿಳಾ ದೌರ್ಜನ್ಯ ನಿವಾರಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಪುತ್ತೂರು ಅಂಚೆ ಕಚೇರಿಯ ಪೊಸ್ಟ್ ಮಾಸ್ಟರ್ ವಸಂತಿ ಕೆ.ಯವರು ಮಾತನಾಡಿ ಅಂಚೆ ಇಲಾಖೆಯಲ್ಲಿ ಮಹಿಳೆಯರಿಗೆ ಇರುವ ವ್ಯವಸ್ಥೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಪುತೂರ್ದ ಮುತ್ತು ಇದರ ಅಧ್ಯಕ್ಷರಾದ ವೇದಾವತಿಯವರು ಮೊಬೈಲ್ ನಿಂದ ಆಗುವ ದುಷ್ಪರಿಣಾಮದ ಬಗ್ಗೆ ವಿವರಿಸಿದರು.

ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ರಫೀಕ್ ದರ್ಬೆಯವರು ಮಾತನಾಡಿ ನಮ್ಮ ಹೆಸರಿನ ಮೊಬೈಲ್ ಸಿಮ್ ಅನ್ನು ಇತರರಿಗೆ ನೀಡುವುದರಿಂದ ಆದಂತಹ ಒಂದು ಪ್ರಕರಣದ ತೊಂದರೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮನದಟ್ಥು ಮಾಡುವ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಪೇನಲ್ ಅಡ್ವಕೇಟ್ ಅಶ್ವಿನಿ,ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ರೋಹಿಣಿ ರಾಘವ ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಸುಮಂಗಲ ಶೆಣೈಯವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಪ್ರಿನ್ಸಿಪಾಲ್ ಪ್ರಮಿಳಾ ಜೆಸ್ಸಿ ಕ್ರಾಸ್ತಾ ವಂದಿಸಿದರು.