ಮಡಿಕೇರಿ: ತಡರಾತ್ರಿ ಜ್ವಾಲಿ ರೈಡ್ಗೆ ಬರುತ್ತಿದ್ದಾರೆ ಹೊರ ರಾಜ್ಯದ ಯುವಕರ ತಂಡ- ಸ್ಥಳೀಯರಲ್ಲಿ ಆತಂಕ
ನೆರೆಯ ಕೇರಳ ರಾಜ್ಯದ ಕೆಲವು ಯುವಕರು ರಾತ್ರಿ 11 ಗಂಟೆಯ ನಂತರ ಗಡಿ ಭಾಗವಾದ ಮಾಕ್ಕೂಟ ಚೆಕ್ಪೋಸ್ಟ್ ಮೂಲಕ ಮಡಿಕೇರಿಗೆ ವಾರಕ್ಕೆ 2 ಬಾರಿ ಪ್ರವೇಶಿಸಿ ಪೆರುಂಬಾಡಿ ತನಕ ಬಂದು ರಾತ್ರಿ 4ರ ಬೆಳಗ್ಗಿನ ಜಾವ ಹಿಂತಿರುಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂದರ್ಭದಲ್ಲಿ ಜಾಲಿ ರೈಡ್ ಬರುವ ಯುವಕರು ವಾಹನದಲ್ಲಿ ಮಾರಕ ಆಯುಧಗಳನ್ನೂ ಕೂಡ ತರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕಾರಣದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ ಎಂದು ಅ ಭಾಗದ ಜನರು ಹೇಳುತ್ತಾರೆ. ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದ್ದು ಚೆಕ್ಪೋಸ್ಟ್ನಲ್ಲಿರುವ ಪೊಲೀಸರು ಹಲವು ಬಾರಿ ಇವರಿಗೆ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರನ್ನು ಪ್ರಶ್ನಿಸಿದರೆ ರಾತ್ರಿ ಕೇರಳದಲ್ಲಿ ತಾಪಮಾನ ಹೆಚ್ಚಿರುವುದರಿಂದ ತಂಪಾದ ಗಾಳಿ ಸವಿಯಲು ಮಡಿಕೇರಿಗೆ ಬಂದಿರುವುದಾಗಿ ಹೇಳುತ್ತಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ತಂಡವಾಗಿ ದ್ವಿಚಕ್ರ ವಾಹನದಲ್ಲಿ ಬರುವ ಈ ಹುಡುಗರಲ್ಲಿ ಹೆಚ್ಚಿನವರು ಕಣ್ಣೂರು, ಇರ್ಟಿ, ಮಟ್ಟನೋರ್ ಭಾಗದವರು ಎಂದು ತಿಳಿದು ಬಂದಿದೆ.
ಮಾಕುಟಾ ಪ್ರದೇಶವು ರಕ್ಷಿತಾರಣ್ಯವಾಗಿದ್ದು, ಅರಣ್ಯ ಇಲಾಖೆ ಕೂಡ ಗಮನ ಹರಿಸಬೇಕಾಗಿದೆ. ಜಿಲ್ಲಾ ಪೊಲೀಸ್ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಜಾರಿಗೊಳಿಸದ್ದಿದರೆ ಮುಂದೆ ಹೆಚ್ಚಿನ ಅನಾಹುತಕ್ಕೆ ಕಾರಣವಾಗಲಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.