ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಂದರ ಪೂಜಾರಿಯವರಿಗೆ ಅರಿಯಡ್ಕ ವಲಯ ಕಾಂಗ್ರೆಸ್ ನಿಂದ ಸ್ವಾಗತ
ಪುತ್ತೂರು: ಭಾರತೀಯ ಗಡಿ ಭದ್ರತಾ ದಳದಲ್ಲಿ (BSF) ಸುದೀರ್ಘ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಜು.31ರಂದು ಸೇವಾ ನಿವೃತ್ತಿ ಹೊಂದಿದ ನಿಡ್ಪಳ್ಳಿಯ ಯೋಧ ಸುಂದರ ಪೂಜಾರಿ ಅವರು ಆ.3ರಂದು ಹುಟ್ಟೂರಿಗೆ ಆಗಮಿಸಿದ ವೇಳೆ ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಕೌಡಿಚ್ಚಾರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರು ಯೋಧ ಸುಂದರ ಪೂಜಾರಿಯವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಅಭಿನಂದಿಸಿ ಗೌರವಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಯೋಧ ರನ್ನು ಗೌರವಿಸುವುದು ನಮ್ಮ ಜವಾಬ್ದಾರಿ ಎಂದು ಅವರು ಹೇಳಿದರು. ಬೂತ್ ಅಧ್ಯಕ್ಷರುಗಳಾದ ಚಂದ್ರಶೇಖರ ಮಣಿಯಾಣಿ, ಬಶೀರ್ ಕೌಡಿಚ್ಚಾರು, ಹಿಂದುಳಿದ ವರ್ಗಗಳ ಸಮಿತಿ ಸದಸ್ಯ ಸಂತೋಷ್ ಕುಲಾಲ್ ಕೌಡಿಚ್ಚಾರು, ಕಾಂಗ್ರೆಸ್ ಮುಖಂಡರಾದ ಲೋಕೇಶ್ ಶೆಟ್ಟಿ ಪಾಪೆಮಜಲು, ಸಿ.ಆರ್.ಸಿ ನಾಗರಾಜ್, ಯೂತ್ ಕಾಂಗ್ರೆಸ್ ಸದಸ್ಯರಾದ ಯೂಸುಫ್ ರಾಝ್, ರಿಫಾನ್ ಹಾಗೂ ಆಫೀಲ್ ಕೌಡಿಚ್ಚಾರು ಉಪಸ್ಥಿತರಿದ್ದರು.
ಯೋಧ ಸುಂದರ ಪೂಜಾರಿಯವರ ದೇಶಸೇವೆಯನ್ನು ಅಭಿನಂದಿಸಿದ ಮುಖಂಡರು, ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.



