ರಾಜಕೀಯರಾಜ್ಯ

ಸಂವಿಧಾನ ಬದಲಿಸುತ್ತೇನೆ ಎಂದು ನಾನು ಹೇಳಿದ್ದರೆ ರಾಜಕೀಯದಿಂದ ನಿವೃತ್ತಿ: ಡಿ.ಕೆ‌.ಶಿವಕುಮಾರ್

ಬೆಂಗಳೂರು: ಸಂವಿಧಾನ ಬದಲಿಸುತ್ತೇನೆ ಎಂದು ನಾನು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಡಿಸಿಎಂ ಡಿ.ಕೆ‌.ಶಿವಕುಮಾರ್ ತಿಳಿಸಿದರು.


ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನನಗೆ ತಲೆಕೆಟ್ಟಿಲ್ಲ. ನಾನು ಸಂದರ್ಶನದಲ್ಲಿ ಸತ್ಯ ಮಾತನಾಡಿರುವುದನ್ನು ಹಾಗೂ ನನ್ನ ರಾಜಕೀಯ ನಿಲುವನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಎಲ್ಲಿ ಹೇಳಿಲ್ಲ, ನಾನು ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ಜಾರಿಗೆ ತಂದವರು ನಾವು, ಅದನ್ನು ನಾವು ರಕ್ಷಣೆ ಮಾಡುತ್ತಿದ್ದೇವೆ ಎಂದರು.


ಬಿಜೆಪಿಯವರು ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ದಡ್ಡರಲ್ಲ, ನಾನು ಏನು ಮಾತನಾಡಿದ್ದೇನೆ ಎಂದು ಅವರು ನೋಡಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿ ಅವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳಿ ಎಂದು ಮಾಧ್ಯಮ ಹಾಗೂ ರಾಜಕೀಯ ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!