ಕರಾವಳಿಕ್ರೀಡೆಜಿಲ್ಲೆ

ಗುಜರಾತ್‌ನಲ್ಲಿ ಜರಗುವ 36ನೇ ರಾಷ್ಟ್ರೀಯ ಕ್ರೀಡೆಯ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ರಾಜ್ಯ ಮಹಿಳಾ ತಂಡಕ್ಕೆ ಫಿಲೋಮಿನಾದಲ್ಲಿ ತರಬೇತಿ:
ದುರ್ಗೆಯಂತೆ ಮಹಿಳಾ ತಂಡ ಜಯಶಾಲಿಗಳಾಗಿ ರಾಜ್ಯಕ್ಕೆ ಕೀರ್ತಿ ತನ್ನಿ-ಮಠಂದೂರು.



ಪುತ್ತೂರು: ಫಿಲೋಮಿನಾ ಕಾಲೇಜು ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ಕ್ರೀಡೆಯಲ್ಲಿ ನೂರಾರು ಪ್ರತಿಭೆಗಳನ್ನು ಹುಟ್ಟು ಹಾಕಿದ ಈ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಮಿತೃವೃಂದ ವಾಲಿಬಾಲ್ ಅಕಾಡೆಮಿಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸೀನಿಯರ್ ಮಹಿಳಾ ತಂಡವು ತರಬೇತಿ ನಡೆಸುತ್ತಿದೆ. ಶಿಷ್ಟರ ರಕ್ಷಕ, ದುಷ್ಟರ ಸಂಹಾರದ ಅವತಾರವೆತ್ತಿದ ದುರ್ಗೆಯಂತೆ ರಾಜ್ಯ ಮಹಿಳಾ ತಂಡವು ಜಯಶಾಲಿಗಳಾಗಿ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಗುಜರಾತ್‌ನ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12ರ ವರೆಗೆ 36ನೇ ರಾಷ್ಟ್ರೀಯ ಕ್ರೀಡೆಯು ಜರಗಲಿದ್ದು, ಗುಜರಾತ್‌ನ ಭಾವ್‌ನಗರದಲ್ಲಿ ನಡೆಯಲಿರುವ ಸೀನಿಯರ್ ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ರಾಜ್ಯ ಸೀನಿಯರ್ ಮಹಿಳಾ ತಂಡಕ್ಕೆ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾಗೆ ಸಂಯೋಜಿತವಾಗಿರುವ ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ಅಡ್-ಹೋಕ್ ಸಮಿತಿ ಮತ್ತು ಪುತ್ತೂರು ಮಿತೃವೃಂದ ವಾಲಿಬಾಲ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಇವುಗಳ ಜಂಟಿ ನೇತೃತ್ವದಲ್ಲಿ ನಡೆದಿರುವ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಕಾಲೇಜಿನ ಸ್ಪಂದನಾ ಸಭಾಂಗಣದಲ್ಲಿ ಜರಗಿದ್ದು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಿಂದ ಮನರಂಜನೆ ಮಾತ್ರವಲ್ಲ, ಕ್ರೀಡೆಯು ಸಮಾಜಮುಖಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಿದೆ. ಗ್ರಾಮೀಣ ಕ್ರೀಡೆಯಾಗಿರುವ ವಾಲಿಬಾಲ್, ಕಬಡ್ಡಿ, ಚೆಸ್ ಇವುಗಳು ಕ್ರಿಕೆಟ್‌ನಂತೆ ಸ್ಟಾರ್‌ವ್ಯಾಲ್ಯೂ ಹೊಂದಿಲ್ಲ. ಹಳ್ಳಿಗಾಡಿನಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಂತಹ ಮಹಿಳಾ ಓಟಗಾರ್ತಿ ಪಿ.ಟಿ ಉಷಾರವರು ಮಹಿಳಾ ತಂಡಕ್ಕೆ ಪ್ರೇರಣೆಯಾಗಲಿ ಎಂದ ಅವರು ಪ್ರತಿಭೆ ಉಳ್ಳವರು ಸತತ ಪ್ರಯತ್ನ ಹಾಗೂ ಆಟದ ಕಡೆಗಿನ ಕೇಂದ್ರೀಕೃತ ಗಮನದಿಂದಾಗಿ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ದೇಶಕ್ಕೆ ಕೀರ್ತಿಯನ್ನು ತರಬೇಕು. ಇತ್ತೀಚೆಗಿನ ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಪದಕ ವಿಜೇತರಾದ ಭಾರತದ 61 ಮಂದಿ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿಯವರು ಸನ್ಮಾನಿಸುವ ಮೂಲಕ ನಮ್ಮ ವ್ಯಕ್ತಿತ್ವವು ದೇಶಕ್ಕೆ ಪರಿಚಯನ್ನುಂಟು ಮಾಡಿದೆ ಎಂದು ಅವರು ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ವಾಲಿಬಾಲ್ ಆಟಗಾರ್ತಿಯರ ನೂತನ ಜೆರ್ಸಿಯನ್ನು ಅನಾವರಣಗೊಳಿಸಿ ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯು ಅಂದಿನಿಂದ ಇಂದಿನವರೆಗೂ ಕ್ರೀಡೆಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಕರ್ಮಭೂಮಿಯಲ್ಲಿ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈಯವರಂತೆ ನೂರಾರು ಪುರುಷ ಹಾಗೂ ಮಹಿಳಾ ಕ್ರೀಡಾ ಪ್ರತಿಭೆಗಳು ಉದ್ಭವಗೊಂಡು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ ಮಾತ್ರವಲ್ಲದೆ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಇಲ್ಲಿನ ಪ್ರತಿಭೆಗಳು ಅರಳಿದ್ದಾರೆ. ಮೇಜರ್ ವೆಂಕಟ್ರಾಮಯ್ಯರವರ ಶಕ್ತಿಯನ್ನು ಹೊಂದಿರುವ ಈ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿರುವ ಮಹಿಳಾ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.

ಬಳಿಕ ಮಹಿಳಾ ಕ್ರೀಡಾಪಟುಗಳು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಪುತ್ತೂರು ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಚೇರ್‌ಮ್ಯಾನ್ ಪಿ.ವಿ ಕೃಷ್ಣನ್‌,ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್‌ನ ಅಡ್-ಹೋಕ್ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ,ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಾಲಚಂದ್ರ ಕೆ., ಉದ್ಯಮಿ ಕೆ.ಬಿ ಖಾಸಿಂ ಹಾಜಿ ಮಿತ್ತೂರು,ವಾಲಿಬಾಲ್ ತರಬೇತುದಾರ ಹಾಗೂ ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ ಪಿ.ವಿ ನಾರಾಯಣನ್, ಮಿತೃವೃಂದ ವಾಲಿಬಾಲ್ ಅಕಾಡೆಮಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜೊತೆ ಕಾರ್ಯದರ್ಶಿ ಸಿರಾಜುದ್ದಿನ್ ಮತ್ತಿತ್ತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!