ಕರಾವಳಿ

ಕೋಡಿಂಬಾಡಿ ಗ್ರಾ.ಪಂ: ವಿಶೇಷ ಚೇತನರಿಗೆ ನೀರಿನ ಟ್ಯಾಂಕ್ ವಿತರಣೆ

ಪುತ್ತೂರು: ಗ್ರಾಮದ ಕಟ್ಟಕಡೇಯ ಬಡವನ ಮನೆಗೂ ಸರಕಾರದಿಂದ ಸೌಲಭ್ಯ ದೊರೆತಾಗ ಮಾತ್ರ ನಾವು ಜನಪ್ರತಿನಿಧಿಯಾಗಿ ಮಾಡುವ ಸೇವೆಗೆ ಗೌರವ ದೊರೆತ ತೃಪ್ತಿ ದೊರೆಯುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಕೋಡಿಂಬಾಡಿ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ನಿಧಿಯಿಂದ ಗ್ರಾಮದ 8 ಮಂದಿ ವಿಶೇಷ ಚೇತನ ವ್ಯಕ್ತಿಗಳಿಗೆ ನೀರಿನ ಟ್ಯಾಂಕ್ ವಿತರಿಸಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ. ಇಂದು ಬಡವರ ಮೂರು ಹೊತ್ತಿನ ಊಟಕ್ಕೂ ಈ ಯೋಜನೆ ಸಹಕಾರಿಯಾಗಿದೆ. ಸಂಘದಿಂದ ಸಾಲ ಅಥವಾ ಕೈ ಸಾಲ ಪಡೆದು ಮನೆ ಕಟ್ಟಿಕೊಂಡ ಸಾವಿರಾರು ಬಡ ಕುಟುಂಬಗಳು ನಮ್ಮ ಕ್ಷೇತ್ರದಲ್ಲಿದೆ ಅವರಿಗೆ ಸರಕಾರದಿಂದ ದೊರೆಯುವ ಗ್ಯಾರಂಟಿಯಿಂದಾಗಿ ದುಡಿದ ಹಣದಲ್ಲಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿದೆ. ಈ ಗ್ಯಾರಂಟಿ ಯೋಜನೆಯನ್ನು ತಂದ ಸರಕಾರವನ್ನು ಜನ ಎಂದಿಗೂ ಮರೆಯಬಾರದು ಎಂದು ಹೇಳಿದ ಶಾಸಕರು ಕೋಡಿಂಬಾಡಿ ಗ್ರಾಪಂ ಇವತ್ತು ಮಾಡಿರುವ ಸಮಾಜಮುಖಿ ಕಾರ್ಯ ಎಲ್ಲಾ ಗ್ರಾಪಂಗಳಿಗೂ ಮಾದರಿಯಗಲಿ. ತಮ್ಮ ಗ್ರಾಮದಲ್ಲಿರುವ ವಿಶೇಷ ಚೇತನರಿಗೆ ನೆರವು ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕು ಅದರಿಂದ ನಮಗೆ ಆತ್ಮ ತೃಪ್ತಿ ಜೊತೆಗೆ ಪುಣ್ಯವೂ ಪ್ರಾಪ್ತಿಯಗುತ್ತದೆ ಎಂದು ಹೇಳಿದರು.

ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಮಾತನಾಡಿ ನಮ್ಮ ಗ್ರಾಪಂ ನ ವಿಶೇಷ ನಿಧಿಯಿಂದ ವಿಶೇಷ ಚೇತನ ವ್ಯಕ್ತಿಗಳಿಗೆ ನಮ್ಮಿಂದಾಗುವ ಸಹಾಯವನ್ನು ಮಾಡಿದ್ದೇವೆ. ಗ್ರಾಮದಲ್ಲಿರುವ ಪ್ರತೀಯೊಬ್ಬ ವಿಶೇಷ ಚೇತನ ವ್ಯಕ್ತಿಯೂ ಕೊರತೆ ಇಲ್ಲದೆ ಬದುಕುವಂತಾಗಬೇಕು. ದುಡಿಮೆ ಮಾಡಲು ಸಾಧ್ಯವಿಲ್ಲದ ಇಂಥಹ ವ್ಯಕ್ತಿಗಳಿಗೆ ಸಹಾಯ ಮಾಡಬೇಕಾಗಿರುವುದು ನಮ್ಮ ಧರ್ಮ ಎಂದು ತಿಳಿದುಕೊಂಡು ನಾವು ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವಂತಾಗಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಉಷಾ, ಜಗನ್ನಾಥ ಶೆಟ್ಟಿ ನಡುಮನೆ, ಕಾರ್ಯದರ್ಶಿ ಅಣ್ಣು, ನೋಡೆಲ್ ಅಧಿಕಾರಿ ಮೀರಾ, ವಿಕಲಚೇತನ ಸಿಬಂದಿ ಲೀಲಾವತಿ ಉಪಸ್ಥಿತರಿದ್ದರು.

ಪಿಡಿಒ ಶೈಲಜಾಭಟ್ ಸ್ವಾಗತಿಸಿದರು. ಸಿಬಂದಿಗಳಾದ ಸುರೇಶ್ ನಾಯ್ಕ, ಸುರೇಶ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!