ಕರಾವಳಿ

ದಲಿತ ಕುಟುಂಬಗಳ ಮನೆಗೆ ಸಂಪರ್ಕ ರಸ್ತೆಗೆ ಸ್ಥಳೀಯರೋರ್ವರು ಕಣಿ ಮಾಡಿರುವ ಆರೋಪ: ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ



ದಲಿತ ಕುಟುಂಬಗಳ ಮನೆಗೆ ಸಂಪರ್ಕ ರಸ್ತೆಗೆ ಸ್ಥಳೀಯರೋರ್ವರು ಕಣಿ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು. ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ದಲಿತ ನಿವಾಸಿಗಳು ವಾಸಿಸುತ್ತಿದ್ದ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯರೋರ್ವರು ಕಣಿ ನಿರ್ಮಿಸಿದ್ದಾರೆ ಎಂಬ ಆರೋಪದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ಮತ್ತು ವಿವಿಧ ದಲಿತ ಸಂಘಟನೆಯ ಮುಖಂಡರು ಸೆ. 4ರಂದು ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ ನಾಲ್ಕುೂರು ಗ್ರಾಮದ ಸರ್ವೇ ನಂಬರ್ 254/5ಎ1 ರಲ್ಲಿ 1.45 ಎಕರೆ ಸರಕಾರಿ ಜಾಗವಿದ್ದು ಇಲ್ಲಿ ಸುಮಾರು 40 ವರ್ಷಗಳಿಂದ ಸ್ಥಳೀಯ ನಾಲ್ಕು ದಲಿತ ಕುಟುಂಬಗಳು ಈ ಭಾಗದ ರಸ್ತೆಯಲ್ಲಿ ನಡೆದಾಡಿಕೊಳ್ಳುತ್ತಿದ್ದರು. ಇದೀಗ ಸ್ಥಳೀಯ ನಿವಾಸಿಯೋರ್ವರು ರಸ್ತೆಯಲ್ಲಿ ಬೃಹತ್ ಕಣಿ ನಿರ್ಮಿಸಿದ್ದು ದಲಿತ ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ,
ಈ ವಿಷಯದ ಕುರಿತು ಕಳೆದ 15 ದಿನಗಳ ಹಿಂದೆ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಯವರೆಗೂ ಮತ್ತು ಸುಳ್ಯ ತಹಶೀಲ್ದಾರರಿಗೂ ಮನವಿಯನ್ನು ನೀಡಲಾಗಿತ್ತು.
ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಸ್ಥಳೀಯ ದಲಿತ ನಿವಾಸಿಗಳಿಗೆ ನೀಡಿದ್ದರು.
ಆದರೆ ಈ ವಿಷಯ ಕಳೆದು ಹದಿನೈದು ದಿನ ಕಳೆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ನಮ್ಮ ಬೇಡಿಕೆಗೆ ಸ್ಪಂದನೆ ನೀಡದಿದ್ದಲ್ಲಿ ನಾವೇ ಮುಂದಾಗಿ ಆ ಕಣಿಯನ್ನು ಮುಚ್ಚುವ ಕೆಲಸವನ್ನು ಮಾಡಲಿದ್ದೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಮತ್ತು ದಲಿತ ಸಮುದಾಯದ ಹೆಚ್ಚಿನ ಬಾಂಧವರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಚಂದ್ರಕಾಂತ್ ಸಂಘಟನೆಯ ಮುಖಂಡರಿಂದ ಮನವಿಯನ್ನು ಸ್ವೀಕರಿಸಿ ತಾವು ನೀಡಿದ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ನೀಡುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕೊಡಂಕಿರಿ, ದಲಿತ ಸಂಘಟನೆಯ ಜಿಲ್ಲಾ ಮುಖಂಡರಾದ ವಿಶ್ವನಾಥ್ ಅಲೆಕ್ಕಾಡಿ, ಅಚ್ಚುತಾ ಮಲ್ಕಾಜೆ, ಸೀನಾ ಬಾಳಿಲ, ಸ್ಥಳೀಯ ಛತ್ರಪ್ಪಾಡಿ ದಲಿತ ನಿವಾಸಿಗಳಾದ ಕುಂಞಪ್ಪಾ,ಚನ್ನು,ಸುಂದರಿ, ನೇತ್ರಾವತಿ,ಅರುಣ,ವಸಂತ, ರಾಮಚಂದ್ರ,ತೀರ್ಥರಾಮ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!