ಸುಳ್ಯ ಕಾಂಗ್ರೆಸ್: ಮುಂದುವರಿದ ಕಚ್ಚಾಟ; ಕಡಬ ಕಾಂಗ್ರೆಸ್ ಸಭೆಯಲ್ಲಿ ಗದ್ದಲ, ಗೊಂದಲ, ತಳ್ಳಾಟ
ಸುಳ್ಯದಲ್ಲಿ ಕಾಂಗ್ರೆಸ್ ಆಂತರಿಕ ಕಚ್ಚಾಟ ಮತ್ತೆ ಮುಂದುವರಿದಿದೆ. ವಿಧಾನಸಭಾ ಚುನಾವಣೆಯ ಮೊದಲು ಪ್ರಾರಂಭಗೊಂಡಿದ್ದ ಭಿನ್ನಮತ, ಆಂತರಿಕ ಕಲಹ ಈಗ ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಬಳಿಕ ವೂ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದೀಗ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಕುರಿತಂತೆ ಕಡಬ ಬ್ಲಾಕ್ನ ಕಡಬದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಬಗ್ಗೆ ವರದಿಯಾಗಿದೆ.

ಕಡಬ ಅಂಬೇಡ್ಕರ್ ಭವನದಲ್ಲಿ ಇಂದು ಈ ಸಭೆ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರೆನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾಟನೆಗೊಳಗಾದ ನಾಯಕರು ಈ ಸಭೆಗೆ ಆಗಮಿಸಿದ್ದ ವೇಳೆ ಜಿ.ಕೃಷ್ಣಪ್ಪ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.


ಸ್ವತಃ ಕೃಷ್ಣಪ್ಪ ಅವರೇ ಉಚ್ವಾಟಿತ ನಾಯಕರಲ್ಲಿ, ನೀವು ಈ ಸಭೆಗೆ ಯಾಕೆ ಬಂದಿದ್ದೀರಿ?, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ಪ್ರಶ್ನಿಸಿದರೆನ್ನಲಾಗಿದೆ. ಕೃಷ್ಣಪ್ಪ ಬೆಂಬಲಿಗರಾದ ಇತರ ನಾಯಕರು ಕೂಡ ಇದನ್ನು ಪ್ರಶ್ನಿಸಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ವಾಟಿತರು ಇರಲು ಅವಕಾಶ ಇದೆಯೇ ಎಂದು ಕೇಳಿದರೆನ್ನಲಾಗಿದೆ. ಈ ವೇಳೆ ಉಭಯ ತಂಡಗಳ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿದ್ದು, ಮಾಹಿತಿ ಪಡೆದ ಪೋಲಿಸರ ಮಧ್ಯಪ್ರವೇಶಿಸದರೆನ್ನಲಾಗಿದೆ.
ಕೃಷ್ಣಪ್ಪ ಬಣದ ಕೆಲವು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ. ನಂದಕುಮಾರ್ ಬಣದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಅಂಬೇಡ್ಕರ್ ಭವನದ ಚಯರ್ ಗಳನ್ನು ಕೂಡ ಎಳೆದಾಡಿದ್ದು, ಪೋಲಿಸರು ಆಗಮಿಸಿ ಇತ್ತಂಡಗಳಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದರೆನ್ನಲಾಗಿದೆ.