ಪುತ್ತೂರಿನಲ್ಲಿ ಮಠಂದೂರು ಮಾಡಿದ ಅಭಿವೃದ್ದಿ ಕೆಲಸ ವೈರಲ್ ಆಗಿದೆ: ಕಾಂಗ್ರೆಸ್
ಪುತ್ತೂರು: ಪುತ್ತೂರಿನಲ್ಲಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರು ಮಾಡಿದ ಅಭಿವೃದ್ದಿ ಕೆಲಸ ಬಹಿರಂಗವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಬೆಳೆಸಿದ ದ್ವೇಷದ ಹಿಂದುತ್ವ ಇಂದು ಅವರಿಗೆ ತಿರುಗುಬಾಣವಾಗಿದೆ. ಹಿಂದುತ್ವದ ಹೆಸರಲ್ಲಿ ಸಮಾಜವನ್ನು ಒಡೆಯುವ ಮೂಲಕ ಓಟು ಪಡೆಯುತ್ತಿದ್ದ ಬಿಜೆಪಿಗರಿಗೆ ಅದೇ ಹಿಂದುತ್ವದ ಕೂಸು ಇಂದು ಬಂಡಾಯವೆದ್ದು ಬಿಜೆಪಿಗೆ ಮುಗ್ಗಳ ಮುಳ್ಳಾಗಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಶಾಸಕರಾಗಿದ್ದ ವೇಳೆ ಮಠಂದೂರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಬಡವರ 94ಸಿ ಅರ್ಜಿಯನ್ನು ವಿಲೇವಾರಿ ಮಾಡಿಸಲು ತಾಕತ್ತಿಲ್ಲದೆ ಹೋಗಿದ್ದ ಅವರು ಅಕ್ರಸಕ್ರಮದಲ್ಲಿ ಹಣ ಸಂಪಾದನೆ ಮಾಡಿದ್ದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ಕುಮಾರ್ ರೈ ಮಾತನಾಡಿ ನಾನು ಆರೆಸ್ಸೆಸ್ನವ ಎಂದು ಎಸ್ಡಿಪಿಐ ಯವರು ಹೇಳುತ್ತಿದ್ದಾರೆ. ನಾನು ಮುಸ್ಲಿಂ ಸಮುದಾಯಕ್ಕೆ ಮಾಡಿರುವಷ್ಟು ನೆರವು ಅವರು ಮಾಡಿದ್ದರೆ ನನ್ನ ಬಳಿ ವಾದಕ್ಕೆ ಬರಲಿ. ನಾನು ಬಿಜೆಪಿಯಲ್ಲಿರುವಾಗಲೂ ಯಾರಿಗೂ ಅನ್ಯಾಯ ಮಾಡಿಲ್ಲ, ಧರ್ಮ ನೋಡಿ ನೆರವು ನೀಡಿಲ್ಲ ಎಂದು ಹೇಳಿದರು.
ನಾನು ಶಾಸಕನಾದರೆ ಬಡವರಿಗೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸುತ್ತೇನೆ ಅದೇನೇ ಬರಲಿ ನಾನು ಅಕ್ರಮಸಕ್ರಮ ಫೈಲ್, 94 ಸಿ ಅರ್ಜಿಗಳನ್ನು ಒಂದೇ ತಿಂಗಳಲ್ಲಿ ವಿಲೇವಾರಿ ಮಾಡಿಸುತ್ತೇನೆ. ಬಡವರು ನೆಮ್ಮದಿಯಿಂದ ಬದುಕುವ ಹಾಗೆ ಮಾಡಿಯೇ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.