ಮುಂಡೂರು: ಮನೆಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣ: ಅಮ್ಮಾ ಎನ್ನುತ್ತಾ ಮನೆಯಿಂದ ಓಡಿ ಬಂದಿದ್ದ ಜಯಶ್ರೀ

ಪುತ್ತೂರು: ಮುಂಡೂರು ಸಮೀಪದ ಕಂಪ ಬದಿಯಡ್ಕದಲ್ಲಿ ನಿನ್ನೆ ಹಾಡಹಗಲೇ ಹತ್ಯೆಯಾದ ಜಯಶ್ರೀ ಅವರ ತಾಯಿ ಗಿರಿಜಾ ಅವರು ಮಗಳ ಹತ್ಯೆಯ ವಿಚಾರವಾಗಿ ಕಣ್ಣೀರು ಸುರಿಸುತ್ತಾ ಅಳಲು ತೋಡಿಕೊಂಡಿದ್ದು ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸುವಂತಿತ್ತು.
ನನ್ನ ಮಗಳು ಮನೆಯಲ್ಲೇ ಇದ್ದಳು. ಅವಳ ಮೊಬೈಲ್ ವಿಷಯದಲ್ಲಿ ಏನೂ ಗೊತ್ತಿಲ್ಲ. ಫ್ರೆಂಡ್ಸ್ಗಳ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಅದರ ಬಗ್ಗೆ ನಾವೇನೂ ಹೇಳುತ್ತಿರಲಿಲ್ಲ. ಹೊರಗಿನವರು ಯಾರೂ ಮನೆಗೆ ಬರುತ್ತಿರಲಿಲ್ಲ. ನಾವ್ಯಾರೂ ಮನೆಯಲ್ಲಿ ಇಲ್ಲದೇ ಇದ್ದರೂ ಒಂಟಿಯಾಗಿ ಮನೆಯಲ್ಲಿ ಧೈರ್ಯವಾಗಿ ಇರುತ್ತಿದ್ದಳು ಎಂದು ಅವರು ಹೇಳಿದ್ದಾರೆ.
ಬೆಳಗ್ಗೆ 11.30ರ ವೇಳೆಗೆ ಘಟನೆ ನಡೆದಿದ್ದು ನಾನು ತರಗೆಲೆ ಸಂಗ್ರಹ ಮಾಡುತ್ತಿದ್ದೆ. ಮತ್ತೆ ತೋಟದಲ್ಲಿ ಹುಲ್ಲು ಕತ್ತರಿಸುತ್ತಿದ್ದೆವು. ಮಗಳು ಮನೆಯಲ್ಲಿ ಒಬ್ಬಳೇ ಇದ್ದು ಪಾತ್ರೆ ತೊಳೆಯುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಅಮ್ಮಾ… ಎನ್ನುತ್ತಾ ಮನೆಯಿಂದ ಓಡಿ ಬಂದಳು. ಏನೋ ಕಚ್ಚಿರಬಹುದು ಎಂದುಕೊಂಡು ನಾವು ಕೂಡ ಓಡಿಬಂದೆವು. ನೋಡಿದಾಗ ಹೊಟ್ಟೆಯಲ್ಲಿ ಚೂರಿ ಇತ್ತು. ನಮ್ಮ ಬೊಬ್ಬೆ ಕೇಳಿ ಅಕ್ಕಪಕ್ಕದವರೆಲ್ಲಾ ಓಡಿಕೊಂಡು ಬಂದರು. ಅಲ್ಲಿಂದ ಆಟೋ ಮೂಲಕ ಆಸ್ಪತ್ರೆಗೆ ಕರೆತಂದೆವು.ಆಕೆಗೆ ಇರಿದ ಚೂರಿ ಕೂಡ ನಮ್ಮ ಮನೆಯದ್ದಲ್ಲ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
ನನ್ನ ಗಂಡ ಒಂದೂವರೆ ವರ್ಷದ ಹಿಂದೆ ನಿಧನ ಹೊಂದಿದ್ದು ಕಷ್ಟದ ಜೀವನ ಸಾಗಿಸುತ್ತಿದ್ದೆವು.
ಇದೀಗ ಮನೆಗೇ ಬಂದು ಮಗಳನ್ನು ಕೊಲೆ ಮಾಡಲಾಗಿದೆ. ಏನಿದ್ದರೂ ಅವಳ ಜೀವ ತೆಗೆಯಬೇಕೆಂದಿರಲಿಲ್ಲ ಎಂದು ಮೃತ ಜಯಶ್ರೀಯವರ ತಾಯಿ ಗಿರಿಜಾ ಹೇಳಿದ್ದಾರೆ.