ಕೊಡಾಜೆ: ತನ್ಹಾ ಫ್ಯಾಶನ್ ಟೈಲರಿಂಗ್, ಅರಿ ಯ್ಯಂಬ್ರೋಡರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ, ಮಾಹಿತಿ ಕಾರ್ಯಾಗಾರ
ಪುತ್ತೂರು: ಬಹಳ ವ್ಯವಸ್ಥಿತವಾದ ಒಂದು ಮಾದರಿ ಕಾರ್ಯಕ್ರಮ ಇಲ್ಲಿ ನಡೆದಿದೆ. ಎಲ್ಲಾ ಕಡೆಗಳಲ್ಲಿ ಟೈಲರಿಂಗ್ ಕ್ಲಾಸ್ ಮಾಡುತ್ತಾರೆ, ಸರ್ಟಿಫಿಕೇಟ್ ಕೊಡ್ತಾರೆ. ಆದರೆ ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡಿ ಸರ್ಟಿಪಿಕೆಟ್ ನೀಡುತ್ತಿರುವುದು ಈ ಭಾಗದಲ್ಲಿ ಇದು ಪ್ರಥಮವಾಗಿದೆ. ಭಾರತ್ ವಹಿಕಲ್ ಬಝಾರ್ ಕೇವಲ ವ್ಯವಹಾರಕ್ಕೆ ಸೀಮಿತವಾಗದ ಸಮಾಜಮುಖಿಯಾಗಿ ಬೆಳೆಯುತ್ತಿದೆ.
ಈ ಭಾಗದ ಜನರ ಮನಗೆಲ್ಲುವಲ್ಲಿ ಭಾರತ್ ಗ್ರೂಪ್ಸ್ ಸಫಲವಾಗಿದೆ ಎಂದು ಮಾಣಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಸುಧೀಪ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಏ.25ರಂದು ನೇರಳಕಟ್ಟೆಯ ಭಾರತ್ ವೆಹಿಕಲ್ ಬಜಾರ್ ನ ಸಹಸಂಸ್ಥೆ ಕೊಡಾಜೆಯಲ್ಲಿರುವ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಯ್ಯಂಬ್ರೋಡರಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಶಕ್ತರನ್ನು ಮೇಲಕ್ಕೆತ್ತುವ ಕೆಲಸ ಭಾರತ್ ವೆಹಿಕಲ್ ಬಝಾರ್ ಸಂಸ್ಥೆಯಿಂದ ಆಗುತ್ತಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡುವ ಕೆಲಸ ಅವರ ಟೈಲರಿಂಗ್ ತರಗತಿಯಿಂದ ಆಗಿದೆ ಎನ್ನಲು ಖುಷಿಯಾಗುತ್ತದೆ. ಇಂತಹ ತರಬೇತಿ ಕೇಂದ್ರಗಳು ಮಹಿಳೆಯರ ಏಳಿಗೆಗೆ ಪೂರಕ ಎಂದರು.

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ನಿರ್ದೇಶಕರಾದ ಪಿ.ಎಂ. ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ವಿದ್ಯಾಭ್ಯಾಸ ಇರಲಿಲ್ಲ. ಆದ್ದರಿಂದ ಆ ಕಾಲದಲ್ಲಿ ಮಹಿಳೆಯರು ಎಲ್ಲಾ ವಿಚಾರದಲ್ಲೂ ಹಿಂದೆ ಉಳಿದಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ವಿದ್ಯಾವಂತರಾಗಿದ್ದಾರೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಕೆಲಸವಾಗಬೇಕು. ಕಲಿಕೆಯಿಂದ ಗಳಿಕೆ ಮಾಡುವ ಕೆಲಸ ಎಲ್ಲರಿಂದಲೂ ಆಗಲಿ ಎಂದರು.

ಭಾರತ್ ವೆಹಿಕಲ್ ಬಝಾರ್ ನ ಮಾಲಕರಾದ ಅಶ್ರಫ್ ಭಾರತ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಸ್ವಿಂಗ್ ಸೊಲ್ಯೂಶನ್ ನ ಮಾಲಕರಾದ ಜಿತೇಂದ್ರ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ನೇರಳಕಟ್ಟೆ, ಮಂಗಳೂರಿನ ಸ್ವಿಂಗ್ ಸೊಲ್ಯೂಶನ್ ನ ವೆಂಕಟೇಶ್, ಪತ್ರಕರ್ತ ಯೂಸುಫ್ ರೆಂಜಲಾಡಿ, ಎಸ್ ಐ ಆರ್ ಡಿ ಪಿ ಯ ಸಂಪನ್ಮೂಲ ವ್ಯಕ್ತಿ ವಿನಯಾ ವಸಂತ್, ವಿಟ್ಲ ನಾಲೆಡ್ಜ್ ಹಬ್ ನ ಮುಖ್ಯಸ್ಥೆ ಮಾಸಿತಾ ಮಹಮ್ಮದ್ ಅಲಿ, ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಯ್ಯಂಬ್ರೋಡರಿ ಸಂಸ್ಥೆಯ ಮುಖ್ಯಸ್ಥೆ ತಾಹಿರಾ ಅಶ್ರಫ್, ಹೆಚ್.ಡಿ.ಬಿ. ಪುತ್ತೂರು ಶಾಖಾ ಸಿಬ್ಬಂದಿ ವಿನೋದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತನ್ಹಾ ಫ್ಯಾಶನ್ ಟೈಲರಿಂಗ್ ಕ್ಲಾಸ್ & ಅರಿ ಯ್ಯಂಬ್ರೋಡರಿ ಸಂಸ್ಥೆಯ ಮುಖ್ಯಸ್ಥೆ ತಾಹಿರಾ ಅಶ್ರಫ್ ರವರನ್ನು ಸಂಸ್ಥೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಸಂಸ್ಥೆಯ ವಿದ್ಯಾರ್ಥಿನಿ ವಂದನಾ ಪ್ರಿಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯ ಬಳಿಕ ಎಸ್ ಐ ಆರ್ ಡಿ ಪಿ ಯ ಸಂಪನ್ಮೂಲ ವ್ಯಕ್ತಿ ವಿನಯಾ ವಸಂತ್ ಅವರು ಮಾಹಿತಿ ಶಿಬಿರ ನಡೆಸಿಕೊಟ್ಟರು. ಭಾರತ್ ವೆಹಿಕಲ್ ಬಝಾರ್ ನ ಮಾಲಕ ಅಶ್ರಫ್ ಸ್ವಾಗತಿಸಿದರು.
ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಭಾರತ್ ವೆಹಿಕಲ್ ಬಝಾರ್ ನ ಸಿಬ್ಬಂದಿಗಳಾದ ಆಸೀಫ್ ಕಲ್ಲಡ್ಕ, ಶರೀಫ್ ಬದನಾಜೆ, ರಿಯಾಜ್ ಬಡಾಜ, ರಫೀಕ್ ಪಂತಡ್ಕ ಸಹಕರಿಸಿದರು.



