ಕುಂಬ್ರದಲ್ಲಿ ‘ಸಂಚಲನ-2026’ ಕಾರ್ಯಕ್ರಮ: ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿಗೆ ಸನ್ಮಾನ
ಪುತ್ತೂರು: ಸುನ್ನತ್ ಜಮಾಅತ್ನ ಬೋಧನೆ ಮತ್ತು ಕಾರ್ಯಾಚರಣೆಗಾಗಿ ಈ ರೀತಿ ಒಟ್ಟುಗೂಡುವುದು, ಸಂಘಟಿಸುವುದು ಕಾಲದ ಅತ್ಯಂತ ಬೇಡಿಕೆಯಾಗಿದ್ದು ಅಹ್ಲ್ ಸುನ್ನತ್ನ ತತ್ವಾದರ್ಶಗಳೇ ನಮ್ಮಬದುಕಿನ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಒಂದು ಕಾಲದಲ್ಲಿ ತಾಲೂಕಿನಾದ್ಯಂತ ಮಿಂಚಿನಂತೆ ಕಾರ್ಯಾಚರಣೆ ನಡೆಸಿದ ನಾಯಕರು, ಕಾರ್ಯಕರ್ತರು ಒಗ್ಗೂಡಿದ ಇಂದಿನ ಸಂಗಮ ಸಂಚಲನ ಯಶಸ್ವಿಯಾಗಿ ಮುಂದುವರಿಯಲಿ ಎಂದು ಜಂಇಯ್ಯತುಲ್ ಉಲಮಾ ಪ್ರಮುಖರಾದ ಉಸ್ತಾದ್ ಬಿ.ಕೆ.ಮುಹಮ್ಮದ್ ಅಲೀ ಫೈಝಿ ಬಾಳೆಪುಣಿ ಹೇಳಿದರು. ಕುಂಬ್ರ ಮರ್ಕಝ್ ಆಡಿಟೋರಿಯಂನಲ್ಲಿ ನಡೆದ ‘ಸಂಚಲನ ೨೦೨೬’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮರ್ಕಝುಲ್ ಹುದಾ ಕರ್ನಾಟಕ ಇದರ ಚೇರ್ಮೆನ್ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಮಾತನಾಡಿ ಎರಡು ದಶಕಗಳ ಹಿಂದೆ ಸಮಾಜಕ್ಕಾಗಿ, ಸುನ್ನತ್ ಜಮಾಅತ್ಗಾಗಿ ಸೇವೆ ಸಲ್ಲಿಸಿದ ಮತ್ತು ಇಂದು ಇಲ್ಲಿ ಸೇರಿರುವ ಎಲ್ಲಾ ನಾಯಕರು ಸಮಾಜದ ಪ್ರಮುಖ ಮೇದಾವಿಗಳಾಗಿದ್ದು ನಿಮ್ಮ ಚಿಂತನೆಗಳು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ, ಸುನ್ನತ್ ಜಮಾಅತ್ಗೆ ದೊಡ್ಡ ಕೊಡುಗೆ ನೀಡಲಿ ಎಂದರು. ಎರಡು ದಶಕಗಳ ಹಿಂದೆ ಈ ನಾಯಕರ, ಕಾರ್ಯಕರ್ತರ ಕಾರ್ಯಾಚರಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದು ಸಕ್ರೀಯ ಗಮನಾರ್ಹ ಸೇವೆ ನೀಡಿದ್ದಾರೆ. ಇದೀಗ ಅಂತಹ ಮೇಧಾವಿಗಳು ಹೊಸ ಹುಮ್ಮಸ್ಸಿನೊಂದಿಗೆ ಸಮಾಜ ಸೇವೆಗೆ ದುಮುಕಿರುವುದು ಸಂತೋಷ ತಂದಿದೆ ಎಂದು ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಹೇಳಿದರು.

ಡಾ.ಎಂಎಸ್ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ಸಂಘಟನೆಗಳು ಯಶಸ್ವಿಯಾಗಿ ಬೆಳೆಯಬೇಕಾದರೆ ನಾಯಕತ್ವ ಗುಣ ಅತೀ ಅಗತ್ಯವಾಗಿದ್ದು ನಾಯಕನಾಗಬೇಕಾದರೆ ತಾಳ್ಮೆ, ಹೊಂದಾಣಿಕೆ, ಇತರರನ್ನು ಅರಿಯುವ ಗುಣ, ಹೆಸರಿನ ಗುಂಗು ಇಲ್ಲದೆ ಎಲ್ಲರನ್ನೂ ಮುನ್ನಡೆಸುವ ಇಚ್ಚಾಶಕ್ತಿ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ಜಿ.ಎಂ ಅಬೂಬಕ್ಕರ್ ಫೈಝಿ ಪೆರುವಾಯಿ ಮಾತನಾಡಿದರು. ಮರ್ಕಝುಲ್ ಹುದಾ ಕರ್ನಾಟಕ ಇದರ ಸದಸ್ಯ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು. ಪೂರ್ವಾಹ್ನ ನಡೆದ ಕಾರ್ಯಕ್ರಮದ ನಿರ್ಣಯ ತಿಳುವಳಿಕೆ ಮಂಡನೆಯನ್ನು ಅಬ್ದುರ್ರಶೀದ್ ಸಖಾಫಿ ಮಜೂರು ನೆರವೇರಿಸಿದರು. ಬೆಳಿಗ್ಗೆ ನಡೆದ ಪ್ರಥಮ ಸೆಷನ್ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಇ. ಅಬೂಬಕ್ಕರ್ ನೆಲ್ಯಾಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಿದ್ದೀಕ್ ಮುಸ್ಲಿಯಾರ್ ಪುತ್ತೂರು ವಹಿಸಿದ್ದರು. ಹಾಜಿ ಬದ್ರುದ್ದೀನ್ ಮುಸ್ಲಿಯಾರ್ ನಗರ ಪ್ರಾರ್ಥನೆ ನೆರವೇರಿಸಿದರು. ಅಬೂಬಕ್ಕರ್ ಹಾಜಿ ಕುದ್ಲೂರು, ಖಾದರ್ ಮುಸ್ಲಿಯಾರ್ ಕುಂತೂರು, ಜಿ.ಎಂ ಕುಂಞಿ ಉಪ್ಪಿನಂಗಡಿ, ಪಿ.ಬಿ. ಅಬ್ದುಲ್ ರಹ್ಮಾನ್ ಮದನಿ ಬನ್ನೂರು, ಅಝೀಝ್ ಸಖಾಫಿ ಕೊಳ್ತಿಗೆ, ಶರೀಫ್ ಕಡಮಾಜೆ, ಮೂಸಕುಂಞಿ ಚೆಲ್ಯಡ್ಕ, ಸಿ.ಕೆ. ಅಬ್ದುಲ್ಲ ಸಅದಿ ಪೊನ್ಮಲ, ತ್ವಾಹ ಸಅದಿ ಈಶ್ವರಮಂಗಲ, ಹಂಝ ಸರ್ವೆ, ಕೆ.ಎಚ್ ಇಸ್ಮಾಯಿಲ್ ಕುಕ್ಕಾಜೆ, ಮುಹಮ್ಮದ್ ಮೈದಾನಿಮೂಲೆ, ಅಝೀಝ್ ರಝ್ವಿ ಮಾಡಾವು, ರಶೀದ್ ಪಾಪೆತ್ತಡ್ಕ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎರಡನೇ ಸೆಷನ್ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಅಹ್ಸನಿ ಕಾಮಿಲ್ ಸಖಾಫಿ ಬನ್ನೂರು ‘ಮುಂದಿನ ಹೆಜ್ಜೆ’ ಎಂಬ ವಿಚಾರದಲ್ಲಿ ಅಧ್ಯನ ತರಗತಿ ನಡೆಸಿಕೊಟ್ಟರು. ಕೆ.ಎ.ಸಿದ್ದೀಕ್ ಮುಸ್ಲಿಯಾರ್ ಸ್ವಾಗತಿಸಿ. ಜಿ.ಎಂ ಕುಂಞು ಉಪ್ಪಿನಂಗಡಿ ವಂದಿಸಿದರು.
ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಗೆ ಸನ್ಮಾನ:
ಸುನ್ನತ್ ಜಮಾಅತ್ ಮತ್ತು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರನ್ನು ಸನ್ಮಾನಿಸಿ ಗೌರವಿಸಲಾಯಿತು.



