ಪರ್ಲಡ್ಕ ಮಾರ್ಗವಾಗಿ ಪಾಣಾಜೆಗೆ ಬಸ್ ಪ್ರಾರಂಭಿಸಲು ಆಗ್ರಹಿಸಿ ಬ್ಲಾಕ್ ಅಧ್ಯಕ್ಷರಿಂದ ಶಾಸಕರಿಗೆ ಮನವಿ
ಪುತ್ತೂರು: ಚೆಲ್ಯಡ್ಕದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಸ್ಥಗಿತಗೊಳಿಸಲಾಗಿದ್ದ ಪುತ್ತೂರು-ಪರ್ಲಡ್ಕ -ಪಾಣಾಜೆ ರಸ್ತೆ ಸಂಚಾರವನ್ನು ಮತ್ತೆ ಪ್ರಾರಂಭಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.

ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಬ್ಲಾಕ್ ಅಧ್ಯಕ್ಷರು ಕಳೆದ ಕೆಲವು ತಿಂಗಳಿಂದ ಚೆಲ್ಯಡ್ಕ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಸೇತುವೆ ಕಾಮಗಾರಿ ಭಾಗಶ ಪೂರ್ಣಗೊಂಡಿದ್ದು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ . ಈ ಕಾರಣಕ್ಕೆ ಈ ರೂಟ್ನಲ್ಲಿ ಈ ಹಿಂದೆ ಸಂಚಾರ ಮಾಡುತ್ತಿದ್ದ ಖಾಸಗಿ ಹಾಗೂ ಇನ್ನಿತರ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಪ್ರಯೋಜನವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮುಂದೆ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಪ್ರಾರಂಭವಾಗಲಿರುವ ಕಾರಣ ಬಸ್ ಸಂಚಾರಕ್ಕೆ ಆದಷ್ಟು ಬೇಗ ಅನುವು ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿದರು.
ಬ್ಲಾಕ್ ಅಧ್ಯಕ್ಷ ರ ಮನವಿಗೆ ಸ್ಪಂದಿಸಿದ ಶಾಸಕರು ವಾರದೊಳಗೆ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ಸೇತುವೆಯ ಬಳಿ ಬಾಕಿ ಇರುವ ಸಣ್ಣಪುಟ್ಟ ಕಾಮಗಾರಿಗಳನ್ನು ಮುಗಿಸಿಬಿಡಬೇಕು ಎಂದು ಲೋಕೋಪಯೋಗಿ ಇಂಜಿನಿಯರ್ಗೆ ಸೂಚನೆ ನೀಡಿದರು. ಒಮ್ಮೆ ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಲ್ಲಿ ಮತ್ತೆ ಎಂದೂ ನಿಲ್ಲುವುದಿಲ್ಲ, ಮಳೆಗಾಲದಲ್ಲಿ ಮುಳುಗುವುದೂ ಇಲ್ಲ ಎಂದು ಈ ಸಂಧರ್ಭದಲ್ಲಿ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಿಯಾನ್ ದರ್ಬೆ, ಸನತ್ ರೈ ವಳತ್ತಡ್ಕ ಉಪಸ್ಥಿತರಿದ್ದರು.





