ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಲೋಪ: ಸದನದಲ್ಲಿ ಸರಕಾರದ ಗಮನ ಸೆಳೆದ ಶಾಸಕ ಅಶೋಕ್ ರೈ
ಪುತ್ತೂರು: 2024-25ರ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಪಾವತಿಸಿದ ಪರಿಹಾರ ಮೊತ್ತ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ತಡವಾಗಿರುವ ಮತ್ತು ಪರಿಹಾರ ಮೊತ್ತ ಕಡಿಮೆಯಾಗಿರುವ ಬಗ್ಗೆ ಬುಧವಾರ ಬೆಳಗಾವಿಯಲ್ಲಿ ನಡೆದ ವಿಧಾಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪ್ರಸ್ತಾಪ ಮಾಡಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ವಿಮಾ ಕಂಪನಿ ಮತ್ತು ದಕ ಹಾಗೂ ಉಡುಪಿ ಜಿಲ್ಲೆಯ ಶಾಸಕರ ಸಭೆಯನ್ನು ನಡೆಸುವುದಾಗಿ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಪಾವತಿಸಿದ ಪರಿಹಾರ ಮೊತ್ತ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ತಡವಾಗಿರುವ ಮತ್ತು ಪರಿಹಾರ ಮೊತ್ತವೂ ಕಡಿಮೆಯಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಂಬ ಸಂಸ್ಥೆಯು ಟೆಲಿಮೆಟ್ರಿಕ್ ಮಾಪನ ಅಳವಡಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆ ಆಧಾರವಾಗಿಟ್ಟುಕೊಂಡು ಬೆಳೆ ವಿಮೆ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಎರಡು ತಿಂಗಳ ತಡವಾಗಿ ವಿಮಾ ಮೊತ್ತವನ್ನು ನೀಡಲಾಗಿದೆ. ಎರಡು ತಿಂಗಳು ವಿಳಂಬವಾಗಿರುವುದು ದೊಡ್ಡ ವಿಚಾರವಲ್ಲ ಆದರೆ ಪಾವತಿಯಾಗಿರುವ ಮೊತ್ತ ಎಷ್ಟು ಕಡಿಮೆಯಾಗಿದೆಯೆಂದರೆ ಕಟ್ಟಿದ ಪ್ರೀಮಿಯಂ ಕಂತಿಗಿಂತಲೂ ಕಡಿಮೆ ಇದ್ದು ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಇಷ್ಟೊಂದು ಕಡಿಮೆ ಮೊತ್ತವನ್ನು ವಿಮಾ ಕಂಪೆನಿ ಪಾವತಿ ಮಾಡಿರುವುದು ದುರದೃಷ್ಟಕರವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ಪಾವತಿ ಮಾಡಬೇಕಿದೆ ಎಂದು ಹೇಳಿದರು.
ಉಭಯ ಜಿಲ್ಲೆಗಳ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ವಿಪರೀತ ಮಳೆ ಇನ್ನೊಂದೆಡೆ ಹಳದಿರೋಗಿ, ಎಲೆ ಚುಕ್ಕಿ ರೋಗದಿಂದ ಬೆಳೆದ ಅಡಿಕೆ ಸಂಪೂರ್ಣ ನಾಶವಾಗಿದೆ. ಬೆಳೆ ವಿಮೆಯಾದರೂ ಸಿಗುತ್ತದಲ್ಲ ಎಂಬ ಧೈರ್ಯದಿಂದ ಇದ್ದ ಕೃಷಿಕರು ಈಗ ಚಿಂತಾಕ್ರಾಸ್ತರಾಗಿದ್ದಾರೆ. ಬೆಳೆ ವಿಮೆ ಸಿಗುತ್ತದೆ ಎಂದು ಸಾಲ ಮಾಡಿ ತಮ್ಮ ಕೃಷಿಯನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಇತ್ತ ಬೆಳೆದ ಅಡಿಕೆಯೂ ಇಲ್ಲ, ಬೆಳೆ ವಿಮೆಯೂ ಇಲ್ಲ ಎಂಬಂತಾಗಿದೆ. ಕೃಷಿಕರು ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ ಎಂದು ಹೇಳಿದರು.
2023ರಲ್ಲಿ 3284 ಮಿ ಮೀ ಮಳೆ ಬಿದ್ದಿದೆ ಆ ವರ್ಷದಲ್ಲಿ 2.5 ಎಕ್ರೆ ಜಾಗವಿದ್ದವರು 6400 ಪ್ರೀಮಿಯಂ ಪಾವತಿಸಿದ್ದಾರೆ ಆ ವೇಳೆ 65400 ವಿಮೆ ಸಿಕ್ಕಿದೆ, 2024ರಲ್ಲಿ 6800 ಪ್ರೀಮಿಯಂ ಪಾವತಿ ಮಾಡಿದ್ದಾರೆ -4500 ರೂ ವಿಮೆ ಸಿಕ್ಕಿದೆ
1 ಎಕ್ರೆ 3500 ಪ್ರೀಮಿಯಂ ಪಾವತಿ ಮಾಡಿದ್ದಾರೆ 24000 ರೂ ವಿಮೆ ಸಿಕ್ಕಿದೆ ಇದರಲ್ಲಿ ತಾರತಮ್ಯ ಮಾಡಿದ್ದಾರೆ. ಯಾಕೆ ಈ ರೀತಿ ಮಾಡಿದ್ದಾರೆ. ಪ್ರೀಮಿಯಂ ಕಟ್ಟಿದಕ್ಕಿಂತ ಕಡಿಮೆ ವಿಮಾ ಮೊತ್ತ ಕೆಲವರಿಗೆ ಬಂದಿದೆ ಇದು ವಿಮಾ ಕಂಪನಿ ಟಾಟಾ ಎಎಜಿ ಕಂಪನಿಯವರ ಈ ರೀತಿ ತಾರತಮ್ಯವನ್ನು ಶಾಸಕರು ಅಧಿವೇಶನದಲ್ಲಿ ಪ್ರಶ್ನಿಸಿದರು.
ಅಡಿಕೆ ಬೆಳೆಗಾರರ ಪರವಾಗಿ ಸದನದಲ್ಲಿ ಗಟ್ಟಿದ್ವನಿಯಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಹವಾಮಾನ ಆಧರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿದೆ. ಕೃಷಿಕರು ಈ ವಿಚಾರದಲ್ಲಿ ಆತಂಕದಲ್ಲಿದ್ದಾರೆ. ಸರಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕು. ಯಾವ ಆಧಾರದಲ್ಲಿ ಈ ರೀತಿ ಪರಿಹಾರ ವಿಮಾ ಮೊತ್ತವನ್ನು ಪಾವತಿ ಮಾಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು. ದ ಕ ಮತ್ತು ಉಡುಪಿ ಜಿಲ್ಲೆಯ ಜನ ಅಡಿಕೆ, ಕಾಳುಮೆನಸು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ಮಳೆಗೆ ಎಲ್ಲವೂ ನಾಶವಾಗಿದೆ. ವಿಮಾ ಮೊತ್ತವೂ ಸರಿಯಾಗಿ ಪಾವತಿಯಾಗದೇ ಇದ್ದಲ್ಲಿ ಅಧಿವೇಶನ ಮುಗಿದು ನಾವು ಹೇಗೆ ಊರಿಗೆ ಹೋಗುವುದು? ಜನ ನಮ್ಮನ್ನು ಪ್ರಶ್ನಿಸುತ್ತಾರೆ? ಜನರ ಪ್ರಶ್ನೆಗೆ ಹೇಗೆ ಉತ್ತರ ಕೊಡಲಿ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಈಗ ಸದನದಲ್ಲಿ ತೋಟಗಾರಿಕಾ ಸಚಿವರೂ ಇಲ್ಲ. ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ದ ಕ ಹಾಗೂ ಉಡುಪಿ ಜಿಲ್ಲೆಯ ಶಾಸಕರು ಹಾಗೂ ವಿಮಾ ಕಂಪೆನಿ ಪ್ರಮುಖರನ್ನು ಕರೆಸಿ ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಯಾವ ಆಧಾರದಲ್ಲಿ ವಿಮಾ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂಬುದನ್ನು ಪರಿಶೀಲನೆ ಮಾಡಬೇಕು, ತಾರತಮ್ಯ ನಡೆದಿರುವ ಬಗ್ಗೆ ವರದಿ ಕೇಳಬೇಕು. ಉಭಯ ಜಿಲ್ಲೆಯ ಕೃಷಿಕರಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು. ಶಾಸಕ ಅಶೋಕ್ ರೈ ಮನವಿಯಂತೆ ಸಭಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದು ಎಂದು ಸರಕಾರ ತೀರ್ಮಾನವನ್ನು ಕೈಗೊಂಡಿತು.



