ಸಂಪ್ಯ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆ
ಪುತ್ತೂರು: ಸಂಪ್ಯದಲ್ಲಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕ(ಎನ್ಐಸಿಯು) ಇದರ ಉದ್ಘಾಟನಾ ಕಾರ್ಯಕ್ರಮ ಡಿ.1ರಂದು ನಡೆಯಿತು.

ಕನ್ನಡ ಹಾಗೂ ತುಳು ಚಿತ್ರನಟಿ ಕು. ಚಿರಶ್ರೀ ಅಂಚನ್ ಅವರು ಹೆರಿಗೆ ಮತ್ತು ಪ್ರಸೂತಿ ಘಟಕವನ್ನು ಉದ್ಘಾಟಿಸಿದದರು. ಎನ್ಐಸಿಯು ಘಟಕವನ್ನು ಖ್ಯಾತ ಮಕ್ಕಳ ತಜ್ಞರಾದ ಡಾ.ತನ್ವಿ ಸುರೇಂದ್ರ ಪೈ ಉದ್ಘಾಟಿಸಿದರು.
ಡಾ. ಶ್ರೀಲತ ಭಟ್ ಅವರ ಪ್ರಸೂತಿ ತಜ್ಞೆ ಡಾ.ಆಸಿಯ ಅಫ್ರಾ ಇಸ್ಮಾಯಿಲ್ ಅವರ ಸಂದರ್ಶಕರ ವಿಭಾಗವನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನರಲ್ ಫಿಸಿಶಿಯನ್ ಹಾಗೂ ಮಧುಮೇಹ ತಜ್ಞರಾದ ಡಾ.ಸ್ವಾತಿ.ಪಿ ವಹಿಸಿದ್ದರು. ಕನ್ನಡ ಹಾಗೂ ತುಳು ಚಿತ್ರನಟಿ ಕು.ಚಿರಶ್ರೀ ಅಂಚನ್ ಮಾತನಾಡಿ ಮೆಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆಗೊಂಡಿದ್ದು ಜನರಿಗೆ ಉತ್ತಮ ಸೇವೆ ಲಭ್ಯವಾಗಲಿ ಎಂದು ಹಾರೈಸಿದರು. ಖ್ಯಾತ ಮಕ್ಕಳ ತಜ್ಞರಾದ ಡಾ.ತನ್ವಿ ಸುರೇಂದ್ರ ಪೈ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಮಂಗಳೂರು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿಯಿದ್ದು ಮೆಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಆದಲ್ಲಿ ಮಂಗಳೂರಿನಲ್ಲಿ ಸಿಗುವ ಆರೋಗ್ಯ ವ್ಯವಸ್ಥೆ ಇಲ್ಲಿಯೇ ಸಿಗಲಿದೆ ಎಂದು ಹೇಳಿ ಶುಭ ಹಾರೈಸಿದರು.

ಮೆಡ್ಲ್ಯಾಂಡ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಆಸಿಯ ಅಫ್ರಾ ಇಸ್ಮಾಯಿಲ್ ಮಾತನಾಡಿ ಗರ್ಭಿಣಿ ಮಹಿಳೆಯರ ಮತ್ತು ನವಜಾತ ಶಿಶುಗಳ ಆರೋಗ್ಯ ಬಹಳ ಮುಖ್ಯವಾಗಿದ್ದು ಆ ಸಂದರ್ಭಗಳಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ, ಮೆಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ, ಶಿಶುಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದು ಹೇಳಿದರು. ಡಾ. ಶ್ರೀಲತ ಭಟ್ ಮಾತನಾಡಿ ಮೆಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಪ್ರಸೂತಿ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆಗೊಂಡಿರುವುದು ಸಂತಸದ ವಿಚಾರ, ಇಲ್ಲಿ ಉತ್ತಮ ಸೇವೆ ಸಿಗಲಿದೆ ಎಂದು ಹೇಳಿದರು.
ಪುತ್ತೂರು ನಗರಸಭೆ ಸದಸ್ಯರಾದ ಶೈಲಾ ಪೈ ಮಾತನಾಡಿ ಸಂಪ್ಯದಲ್ಲಿ ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಆಸ್ಪತ್ರೆ ನಿರ್ಮಾಣವಾಗಿರುವುದರಿಂದ ಮಂಗಳೂರಿಗೆ ಹೋಗಬೇಕಾದ ಸನ್ನಿವೇಶ ದೂರವಾದೀತು ಎಂದು ಹೇಳಿ ಶುಭ ಹಾರೈಸಿದರು.
ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ ಮಾತನಾಡಿ ಗರ್ಭಿಣಿ ಮಹಿಳೆಯರ ಹಾಗೂ ಹುಟ್ಟುವ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ಉತ್ತಮ ಆರೋಗ್ಯ ಸೇವೆಯನ್ನು ಮೆಡ್ಲ್ಯಾಂಡ್ ಆಸ್ಪತ್ರೆ ನೀಡಲಿದ್ದು ಇಲ್ಲಿ ಕೇವಲ ಔಷಧ ಮಾತ್ರವಲ್ಲದೇ ರೋಗಿಗಳ ಬಗ್ಗೆ ಕಾಳಜಿ, ಜವಾಬ್ದಾರಿ ಮತ್ತು ಗುಣಮಟ್ಟದ ಸೇವೆ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮಾತನಾಡಿ ಮೆಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಅತೀ ಅವಶ್ಯಕತೆಯಿದ್ದ ಹೆರಿಗೆ ಮತ್ತು ಪ್ರಸೂತಿ ವಿಭಾಗ ಆರಂಭಗೊಂಡಿದ್ದು ಸ್ಪರ್ಧಾತ್ಮಕ ದರ ಮತ್ತು ಅತ್ಯುತ್ತಮ ಸೇವೆ ಸಿಗಲಿ ಎಂದು ಅವರು ಹಾರೈಸಿದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯ ಮಾತನಾಡಿ ಬಹಳ ವರ್ಷಗಳ ಸುಸಜ್ಜಿತ ಆಸ್ಪತ್ರೆಯ ಕನಸೊಂದನ್ನು ಕಮ್ಮಾಡಿ ಹಾಜಿಯವರ ಪುತ್ರ ಡಾ.ಅಶ್ರಫ್ ಕಮ್ಮಾಡಿ ನೆರವೇರಿಸಿದ್ದು ಇದು ಗ್ರಾಮೀಣ ಜನತೆಗೆ ಬಹಳ ಉಪಯುಕ್ತವಾಗಿದೆ, ಅತೀ ಅಗತ್ಯವಿದ್ದು ಹೆರಿಗೆ ವಿಭಾಗ ಆರಂಭಗೊಂಡಿರುವುದು ಸಂತಸದ ವಿಚಾರ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ನಗರಸಭೆ ಸದಸ್ಯೆ ಫಾತಿಮತ್ ಝೊಹರ, ಆರ್ಯಾಪು ಗ್ರಾ.ಪಂ ಸದಸ್ಯೆ ರಶೀದಾ.ಬಿ ಉಪಸ್ಥಿತರಿದ್ದರು. ಮೆಡ್ಲ್ಯಾಂಡ್ ಆಸ್ಪತ್ರೆಯ ಚೇರ್ಮೆನ್ ಡಾ.ಅಶ್ರಫ್ ಕಮ್ಮಾಡಿ, ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಡಾ.ವಿಶಾಲ್ ಯು.ಪಿ, ಮ್ಯಾನೇಜಿಂಗ್ ಡೈರೆಕ್ಟರ್ ಅಶ್ಮೀರ್ ಕಮ್ಮಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಝಾಕ್ ಸಾಲ್ಮರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ವಿಧಿಶಾ ಸ್ವಾಗತಿಸಿದರು. ಮಮತಾ ವಂದಿಸಿದರು. ರಾಹಿಲಾ ಕಾರ್ಯಕ್ರಮ ನಿರೂಪಿಸಿದರು.



