ಮಂಗಳೂರು: ಕೋಮು ಸಂಘರ್ಷ ತಡೆಗಟ್ಟಲು ಪೊಲೀಸ್ ವಿಶೇಷ ಕಾರ್ಯಪಡೆ ಘಟಕ ಅಸ್ತಿತ್ವಕ್ಕೆ: ಗೃಹ ಸಚಿವ ಪರಮೇಶ್ವರ್ ಚಾಲನೆ
ಮಂಗಳೂರು: ಮಂಗಳೂರಿನಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ‘ಸ್ಪೆಷಲ್ ಆ್ಯಕ್ಷನ್ ಫೋರ್ಸ್’ ಇಂದು ಅಸ್ತಿತ್ವಕ್ಕೆ ಬಂದಿದೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೂತನ ವಿಶೇಷ ಕಾರ್ಯಪಡೆ ಘಟಕಕ್ಕೆ ಚಾಲನೆ ನೀಡಿದರು.

ಕೋಮು ಸಂಘರ್ಷ ಸಿಲುಕಿದ್ದ ಮಂಗಳೂರಿಗೆ ನೂತನ ಪೊಲೀಸ್ ಪಡೆಯ ಆಗಮನವಾಗಿದೆ. ರಾಜ್ಯ ಸರ್ಕಾರ ಕೊನೆಗೂ ಕೋಮು ಸಂಘರ್ಷ ತಡೆಗಟ್ಟಲು ಹೊಸ ತಂಡವನ್ನು ಹುಟ್ಟುಹಾಕಿದೆ. ಸ್ಪೆಷಲ್ ಆಕ್ಷನ್ ಫೋರ್ಸ್ ಎಂಬ ಪೊಲೀಸ್ ಪಡೆ ಮಂಗಳೂರಿನಲ್ಲಿ ಇಂದಿನಿಂದ ಅಸ್ತಿತ್ವಕ್ಕೆ ಬರಲಿದೆ.

ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಪೊಲೀಸ್ ವಿಶೇಷ ಕಾರ್ಯಪಡೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹೆಗಲಿಗೆ ಈ ವಿಶೇಷ ಕಾರ್ಯ ಪಡೆಯ ಹೆಚ್ಚುವರಿ ಹೊಣೆ ಇರಲಿದೆ. ಮಂಗಳೂರು ನಗರ ಕೇಂದ್ರದಲ್ಲಿಯೇ ಎಸ್ಎಎಫ್ ಕಾರ್ಯಪಡೆಯ ಕೇಂದ್ರ ಕಚೇರಿ ಇರಲಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ ಹೊಸ ಪಡೆಗೆ ನಿಯೋಜನೆ ಮಾಡಲಾಗಿದೆ.
ಎಸ್ಎಎಫ್ ಉದ್ಘಾಟಿಸಿದ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ರೆ ರಾಜ್ಯದಲ್ಲಿ ಶಾಂತಿ ಇರುತ್ತೆ. ಈ ಕಾರ್ಯಪಡೆ ಕೆಲಸಕ್ಕೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಇದನ್ನೇ ದೊಡ್ಡದು ಮಾಡಿ ವಿಭಜನೆ ಮಾಡುವುದು ಸರಿಯಲ್ಲ. ಅಗತ್ಯವಿದ್ದರೆ ಇಡೀ ರಾಜ್ಯದಲ್ಲಿ ಈ ಕಾರ್ಯಪಡೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದ್ದಾರೆ.