ಚೆನ್ನಾರ್ ನಿವಾಸಿ ಕರೀಮ್ ಹಾಜಿ ನಿಧನ
ಪುತ್ತೂರು: ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರು ನಿಧನ ಹೊಂದಿದ ಘಟನೆ ವರದಿಯಾಗಿದೆ.
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಅಧ್ಯಕ್ಷ, ಚೆನ್ನಾರ್ ನಿವಾಸಿಯಾಗಿರುವ ಕರೀಂ ಹಾಜಿ(54.ವ) ಎ.24ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ.

ಸುನ್ನೀ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕರೀಂ ಹಾಜಿಯವರು ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಳ್ಳುತ್ತಿದ್ದರು. ಕರೀಂ ಹಾಜಿಯವರ ಅಣ್ಣ ಫಯಾಜ್ ಹಾಜಿ ಅವರು ಎ.22ರಂದು ಸೌದಿ ಅರೇಬಿಯಾದಲ್ಲಿ ನಿಧನ ಹೊಂದಿದ್ದು ಇಂದು ಅವರ ದಫನ ಕಾರ್ಯ ಅಲ್ಲೇ ನಡೆದಿತ್ತು.
ಇಂದು ಸಂಜೆ ಕರೀಂ ಹಾಜಿಯವರೂ ನಿಧನ ಹೊಂದಿದ್ದು ಕುಟುಂಬಕ್ಕೆ ಒಂದರ ಮೇಲೊಂದು ಆಘಾತ ಉಂಟಾಗಿದೆ. ಫಯಾಜ್ ಹಾಜಿ ನಿಧನ ಸುದ್ದಿ ಕೇಳಿದ ಬಳಿಕ ಕರೀಂ ಹಾಜಿಯವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆಯದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮೃತರು ಪತ್ನಿ ಅಸ್ಮಾ, ಐದು ಮಕ್ಕಳು, ಸಹೋದರರಾದ ಹಾಫಿಲ್ ಅಬ್ದುಲ್ ಸಲಾಮ್ ನಿಝಾಮಿ ಚೆನ್ನಾರ್, ಅಬ್ದುಲ್ ಮುತ್ತಲಿಬ್ ಚೆನ್ನಾರ್, ಅಬ್ದುಲ್ ಅಝೀಝ್ ಚೆನ್ನಾರ್ ಅವರನ್ನು ಅಗಲಿದ್ದಾರೆ.