ಕರಾವಳಿಕ್ರೈಂ

ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆಗೈದ ಆರೋಪಿಗೆ ಮರಣ ದಂಡನೆ ಶಿಕ್ಷೆ

ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆಗೈದು, ಪತ್ನಿಯನ್ನು ಕೊಲೆಗೆ ಯತ್ನಿಸಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ, ಕಿನ್ನಿಗೋಳಿ ಪದ್ಮನೂರು‌ ನಿವಾಸಿ ಹಿತೇಶ್‌ ಶೆಟ್ಟಿಗಾ‌ರ್ ಎಂಬಾತನಿಗೆ ಮಂಗಳೂರು ನ್ಯಾಯಾಲಯವು ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.

ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5.15ಕ್ಕೆ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ (11), ದಕ್ಷಿತ್ (5) ಎಂಬವರನ್ನು ಬಾವಿಗೆ ತಳ್ಳಿ ಹಾಕಿ ಕೊಲೆ ಮಾಡಿದ್ದಲ್ಲದೆ, ತನ್ನ ಪತ್ನಿ ಲಕ್ಷ್ಮಿ ಯನ್ನು ಅದೇ ಬಾವಿಗೆ ತಳ್ಳಿ ಕೊಲೆಗೆ ಯತ್ನಿಸಿದ್ದ.

ಆರೋಪಿಯು ಯಾವುದೇ ಕೆಲಸ ಮಾಡದೆ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದು, ಅದೇ ದ್ವೇಷದಿಂದ ಆಗಷ್ಟೆ ಶಾಲೆಯಿಂದ ಬಂದಿದ್ದ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಕೂಡ ಕೊಲೆ ಮಾಡುವ ಉದ್ದೇಶದಿಂದ ಮನೆಯ ಪಕ್ಕದ ಬಾವಿಗೆ ದೂಡಿ ಹಾಕಿದ್ದ. ಲಕ್ಷ್ಮಿಯ ಬೊಬ್ಬೆ ಕೇಳಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಬಾವಿಗೆ ಇಳಿದು ಲಕ್ಷ್ಮಿಯವರನ್ನು ರಕ್ಷಿಸಿದ್ದರು. ಮಕ್ಕಳನ್ನು ಬಾವಿಗೆ ಹಾಕಿದ ವೇಳೆ ಹಿರಿಯ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿರುವುದನ್ನು ಕಂಡ ಆರೋಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.

ಘಟನೆಯ ಬಗ್ಗೆ ಲಕ್ಷ್ಮಿ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್‌ ನಿರೀಕ್ಷಕ ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಎಸ್ಐ ಸಂಜೀವ ತನಿಖೆಗೆ ಸಹಕರಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕ ಮೋಹನ ಕುಮಾರ್ ವಾದ ಮಂಡಿಸಿದ್ದರು

Leave a Reply

Your email address will not be published. Required fields are marked *

error: Content is protected !!