ಪುತ್ತೂರು: ತಮ್ಮನನ್ನು ಕೊಲೆ ನಡೆಸಿ ಪರಾರಿಯಾಗಿದ್ದ ಅಣ್ಣ ಬಂಧನ
ಪುತ್ತೂರು: ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಕೆಲ ದಿನಗಳ ಹಿಂದೆ ತಮ್ಮನನ್ನು ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪದಲ್ಲಿ ಅಣ್ಣನನ್ನು ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ.

ಕೂಲಿ ಕಾರ್ಮಿಕ ಸಹೋದರರಾದ ನಿಂಗಪ್ಪ ಮತ್ತು ಮಹಾದೇವ ಎಂಬವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು. ಈ ಸಂದರ್ಭ ಮಹಾದೇವ ಅವರ ತಲೆಗೆ ಕಬ್ಬಿಣದ ರಾಡ್ ನಿಂದ ನಿಂಗಪ್ಪ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣೆಯ ಪೊಲೀಸರು ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಾಣಿ ದ.ಕ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ದ.ಕ ಜಿಲ್ಲೆ ಅವರ ನಿರ್ದೇಶನದಂತೆ ಪುತ್ತೂರು ಉಪ ವಿಭಾಗದ ಪೊಲೀಸ್ ಅಧೀಕ್ಷಕ ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನದಂತೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಎಂ. ಎನ್ .ರಾವ್ ಪೊಲೀಸ್ ನಿರೀಕ್ಷಕರ ವಿಶೇಷ ತಂಡದ ಸಿಬ್ಬಂದಿ ಸ್ಕರಿಯಾ, ಜಗದೀಶ್ , ಕಿರಣ್ ಕುಮಾರ್ , ವಿರುಪಾಕ್ಷ ಅವರ ತಂಡ ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ನಿಂಗಪ್ಪ ಗೌಡ ನನ್ನು ವಶಕ್ಕೆ ಪಡೆದು ಪುತ್ತೂರು ನಗರ ಠಾಣೆಗೆ ಕರೆ ತಂದು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ತಲೆ ಬೋಳಿಸಿಕೊಂಡಿದ್ದು ತನ್ನನ್ನು ಪೊಲೀಸರು ಪತ್ತೆ ಹಚ್ಚದಿರಲಿ ಎನ್ನುವ ಕಾರಣಕ್ಕೆ ಆ ರೀತಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ತಾನು ದೇವರ ದರ್ಶನಕ್ಕೆ ಹೋಗಿ ತಲೆ ಬೋಳಿಸಿಕೊಂಡಿದ್ದೇನೆ ಎಂದು ಆರೋಪಿ ಹೇಳಿರುವುದಾಗಿ ವರದಿಯಾಗಿದೆ.





