ಪುತ್ತೂರು ಕಮ್ಯೂನಿಟಿ ಸೆಂಟರ್’ನ ಸಾಧಕ ವಿದ್ಯಾರ್ಥಿಗಳ ಹೆತ್ತವರಿಗೆ ಉಮ್ರಾ ಯಾತ್ರೆಯ ಕೊಡುಗೆ
ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೌದ್ದಿಕ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಗುರುತಿಸಿ ಅವರಿಗೆ ವೃತ್ತಿಪರ ಕ್ಷೇತ್ರದ ಗುರಿ ತಲುಪಲು ಬೇಕಾದ ಎಲ್ಲಾ ಅನುಕೂಲತೆ ಮಾಡಿಕೊಟ್ಟಿರುವ ಕಮ್ಯೂನಿಟಿ ಸೆಂಟರ್ ಇದೀಗ ತನ್ನ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಈ ವರ್ಷದ ಸಾಧಕ ವಿದ್ಯಾರ್ಥಿಗಳ ಹೆತ್ತವರಿಗೆ ಉಮ್ರಾ ಯಾತ್ರೆಯ ಕೊಡುಗೆ ನೀಡಿದೆ.
ಸೆಂಟರಿನಲ್ಲಿ 2022 ರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲಿ 6 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಗೆ ಅರ್ಹತೆ ಸಿಕ್ಕಿ ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ಸಿಕ್ಕಿರುತ್ತದೆ. ಉಳಿದಂತೆ 3 ವಿದ್ಯಾರ್ಥಿಗಳು ಸೆಂಟರಿನ ಕೌನ್ಸಿಲಿಂಗ್ ಮತ್ತು ನೀಟ್ ಕೋಚಿಂಗ್ ಮೂಲಕ ಮೆಡಿಕಲ್ ಸೀಟು ಪಡೆಯಲು ಸಾದ್ಯವಾಗಿದೆ. ಈ ಮೂಲಕ ಸೆಂಟರ್ 9 ಎಂ.ಬಿ.ಬಿ.ಎಸ್, 5 ಬಿಡಿಎಸ್, 1 ಬಿ.ಎ.ಎಂ.ಎಸ್ ವಿದ್ಯಾರ್ಥಿಗಳ ಸಾಧನೆಗೆ ನೆರವಾಗಿದೆ.
ಸೆಂಟರಿನಲ್ಲಿ ಈಗಾಗಲೇ 317 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುತ್ತಾ ವೃತ್ತಿಪರ ಪಧವಿಯ ಅಧ್ಯಯನದಲ್ಲಿದ್ದಾರೆ. 12 ವಿದ್ಯಾರ್ಥಿಗಳು ಪ್ರೊಫೇಸರ್, ಇಬ್ಬರು ವಿದ್ಯಾರ್ಥಿಗಳು ಸಿ.ಎ, ೮ ವಿದ್ಯಾರ್ಥಿಗಳು ಕಾನೂನು, 30 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ, 50 ವಿದ್ಯಾರ್ಥಿಗಳು ನೀಟ್, ಜೆಇ, ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಲು ಪರಿಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ, ಮೆಂಟರಿಂಗ್, ಪ್ರೋತ್ಸಾಹವನ್ನು ಸಂಸ್ಥೆ ನೀಡುತ್ತಿದೆ.
ಕಳೆದ ವರ್ಷದಲ್ಲಿ ಸೆಂಟರಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆತ್ತವರಿಗೆ ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯರವರು ಉಮ್ರಾ ಯಾತ್ರೆ ಮಾಡಿಸುವ ಕೊಡುಗೆಯನ್ನು ಘೋಷಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹೆತ್ತವರು ಹಲವಾರು ಸಮಸ್ಯೆಗಳನ್ನು ಎದುರಿಸಿ ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿಸುತ್ತಿರುವುದನ್ನು ಶ್ಲಾಘಿಸಿರುವ ಸಂಸ್ಥೆಯ ಪ್ರಮುಖರು, ಈ ಹೆತ್ತವರಲ್ಲಿ ಇರುವ ಕನಸುಗಳಲ್ಲಿ ಒಂದಾಗಿದೆ ಮಕ್ಕಾದ ಕಾಬಾ ಭವನವನ್ನು ಕಣ್ಣಾರೆ ನೋಡುವುದು ಅವರ ಕನಸು ಮತ್ತು ಇಚ್ಚೆಯನ್ನು ಪೂರ್ತಿಗೊಳಿಸುವ ಉದ್ದೇಶದಿಂದ ಸೆಂಟರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆತ್ತವರಿಗೆ ಈ ಕೊಡುಗೆ ನೀಡಿದ್ದಾರೆ.
ಕಳೆದ ವರ್ಷದ ಪರೀಕ್ಷೆಯ ಫಲಿತಾಂಶ, ಆರ್ಥಿಕ ಹಿನ್ನಲೆ, ಗ್ರಾಮಾಂತರ ಮತ್ತು ತಾಯಿ ಅಥವಾ ತಂದೆ ಮಾತ್ರವೇ ಇರುವ ವಿದ್ಯಾರ್ಥಿಗಳು ಮೊದಲ ಆದ್ಯತೆಯಲ್ಲಿ ಈ ಕೊಡುಗೆ ಪಡೆಯಲಿದ್ದಾರೆ ಎಂದು ಸೆಂಟರಿನ ಅಧ್ಯಕ್ಷರಾದಅಮ್ಜದ್ ಖಾನ್ ಪೊಳ್ಯ ತಿಳಿಸಿದ್ದಾರೆ.