ಕರಾವಳಿಕ್ರೈಂ

ಪುತ್ತೂರು: ಯುವತಿಯನ್ನು ಸ್ಕೂಟರ್‌ನಲ್ಲಿ ಬರ್ತೀಯಾ ಎಂದು ಕೇಳಿದ ಆರೋಪ
ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿತ

ಪುತ್ತೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಯೊರ್ವಳನ್ನು ಸ್ಕೂಟರ್‌ನಲ್ಲಿ ಬರುತ್ತಿದ್ದ ಯುವಕನೋರ್ವ ‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದು ಕೇಳಿದ್ದಾನೆ ಎಂದು ಯುವತಿ ಮಾಡಿದ ಆರೋಪದ ಮೇರೆಗೆ ಸಾರ್ವಜನಿಕರು ಯುವಕನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬಲ್ನಾಡು ಗ್ರಾಪಂ ವ್ಯಾಪ್ತಿಯ ಸಾಜ ಪನೆತ್ತಡ್ಕ ಎಂಬಲ್ಲಿಂದ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಅ.20ರಂದು ಸಂಜೆ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅದೇ ದಾರಿಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಾಜ ನಿವಾಸಿ ನಾಗರಾಜ್ ಎಂಬವರು ಬರ್ತೀಯಾ ಎಂದು ಕೇಳಿದ್ದಾರೆ ಎನ್ನಲಾಗಿದ್ದು ಈ ವಿಷಯವನ್ನು ಯುವತಿಯು ತನ್ನ ಮನೆಯಲ್ಲಿ ತಿಳಿಸಿದ್ದಾರೆ.

ನಾಗರಾಜ್‌ರವರ ಸ್ಕೂಟರ್ ಪನೆತ್ತಡ್ಕ ಎಂಬಲ್ಲಿಗೆ ತಲುಪಿದಾಗ ಹಾಳಾಗಿದ್ದು ಸ್ಕೂಟರ್ ಅನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಮರುದಿವಸ ಅಂದರೆ ಅ.೨೧ ರಂದು ಬೆಳಿಗ್ಗೆ ಮೆಕ್ಯಾನಿಕ್‌ರವರನ್ನು ಕರೆದುಕೊಂಡು ಸ್ಕೂಟರ್ ನಿಲ್ಲಿಸಿದ್ದ ಪನೆತ್ತಡ್ಕಕ್ಕೆ ಬಂದಾಗ ಸ್ಥಳದಲ್ಲಿ ಸೇರಿದವರು ನಾಗರಾಜ್‌ರವರನ್ನು ಹಿಡಿದು ವಿದ್ಯುತ್ ಕಂಬಕ್ಕೆ  ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಇದೇ ವೇಳೆ ಕೆಲವರು ನಾಗರಾಜ್‌ಗೆ ಥಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ವಿದ್ಯುತ್ ಕಂಬದಿಂದ ಬಿಡಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!