ಉಪ್ಪಿನಂಗಡಿ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ನಿಧನ
ಪುತ್ತೂರು: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ನೆಕ್ಕಿಲಾಡಿಯ ಮನೆಯಲ್ಲಿ ಜೂ.14ರಂದು ನಿಧನರಾಗಿದ್ದಾರೆ.

ಮೃತರು ಮೂಲತಃ ಮಠ ಗ್ರಾಮದ ನಿವಾಸಿಯಾಗಿದ್ದು, ಸದ್ಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಬದ್ರುದ್ದೀನ್ ಮಠ ಎಂದು ಗುರುತಿಸಲಾಗಿದೆ.
2025ರ ಡಿಸೆಂಬರ್ 11ರ ರಾತ್ರಿ ಬದ್ರುದ್ದೀನ್ ಅವರು ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಬಂದ ಕಾರು ಅವರ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಬದ್ರುದ್ದೀನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದ ಬಳಿಕ ಅವರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಕೋಮಾ ಸ್ಥಿತಿಗೆ ತಲುಪಿದ್ದರು.
ದೀರ್ಘಕಾಲದ ಚಿಕಿತ್ಸೆಯ ನಂತರ, ಅವರನ್ನು ಮನೆಗೆ ಕರೆತರಲಾಗಿತ್ತು. ಮನೆಯಲ್ಲೇ ಕುಟುಂಬಸ್ಥರ ಆರೈಕೆಯಲ್ಲಿದ್ದ ಬದ್ರುದ್ದೀನ್ ಅವರು ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದರು.




