ಕರಾವಳಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ಆರೋಪ: ಕಚೇರಿಗೆ ಶಾಸಕರ ದಿಡೀರ್ ಭೇಟಿ- ಅಧಿಕಾರಿಯ ತರಾಟೆಗೆತ್ತಿಕೊಂಡ ಶಾಸಕರು



ಪುತ್ತೂರು: ಇಲ್ಲಿನ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಬಾರೀ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಆ.8 ರಂದು ಸಂಜೆ ಸಿಡಿಪಿಒ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.

ಶಾಸಕರು ಬೇಟಿ ನೀಡುವ ವೇಳೆ ಅಧಿಕಾರಿ ಶ್ರೀಲತಾ ಅವರು ಕಚೇರಿಯಲ್ಲಿರಲಿಲ್ಲ ಕರೆ ಮಾಡಿದಾಗ ಬೆಳ್ತಂಗಡಿ ಹೋಗಿರುವುದಾಗಿ ತಿಳಿಸಿದರು. ಈ ವೇಳೆ ಮೊಬೈಲ್ ಮೂಲಕವೇ ಅಧಿಕಾರಿ ಶ್ರೀಲತಾ ಅವರನ್ನು ತರಾಟೆಗೆ ಎತ್ತಿಕೊಂಡ ಶಾಸಕರು ‘ಇಲಾಖೆಯಿಂದ ಅಂಗನವಾಡಿಗೆ ಆಹಾರ (ಫುಡ್‌) ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಖಾಸಗಿ ವ್ಯಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡು ಆಹಾರ ತಯಾರಿಕಾ ವ್ಯವಸ್ಥೆಯನ್ನು ಗುತ್ತಿಗೆ ನೀಡಿದ್ದೀರಿ, ಫುಡ್ ಸರಿಯಾಗಿ ವಿತರಣೆಯಿಲ್ಲ ಮತ್ತು ಗುಣಮಟ್ಟವಿಲ್ಲ. ಅರ್ಧಕ್ಕರ್ಧ ಫುಡ್ ಮಾತ್ರ ವಿತರಣೆ ಮಾಡಲಾಗುತ್ತಿದೆ, ಎಲ್ಲವೂ ನಿಮ್ಮ ಇಷ್ಟದಂತೆ ಮಾಡುತ್ತೀರಿ ಏನು? ಸರಕಾರದ ಸುತ್ತೋಲೆಯಂತೆ ಇಲ್ಲಿ ವ್ಯವಹಾರ ನಡೆಯಬೇಕು ಎಂದು ಶಾಸಕರು ಸೂಚಿಸಿದರು.

ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿದೆ. ನಾನು ಶಾಸಕನಾಗಿ ಎರಡು ತಿಂಗಳು ಕಳೆದಿದೆ. ಬಹುತೇಕ ಎಲ್ಲಾ ಅಧಿಕಾರಿಗಳು ನನ್ನನ್ನು ಶಾಸಕನೆಂಬ ನೆಲೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಸಿಡಿಪಿಒ ಅವರು ಬರಲೇ ಇಲ್ಲ. ಇಲಾಖೆಗೆ ಸಂಬಂದಪಟ್ಟ ಯಾವುದೇ ಮಾಹಿತಿಯನ್ನು ನನ್ನ ಜೊತೆ ಹಂಚಿಕೊಂಡಿಲ್ಲ,ಅವ್ಯವಹಾರದ ಬಗ್ಗೆ ಕೇಳೋಣ ಎಂದು ಕಚೇರಿಗೆ ಕರೆದರೆ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಜನರಿಗೆ ನಾನು ಏನೆಂದು ಉತ್ತರಕೊಡಬೇಕು. ನಾನು ಕರೆದ ಯಾವುದೇ ಸಭೆಗೂ ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆಹಾರ ತಯಾರಿಕೆಯನ್ನು ಅವರಿಗಿಷ್ಟ ಬಂದವರಿಗೆ ಟೆಂಡರ್ ಕರೆಯದೆ ಗುತ್ತಿಗೆ ನೀಡಿ ಅದರಲ್ಲಿ ಅಧಿಕಾರಿ ಮತ್ತು ಮಂಗಳೂರಿನ ಒಬ್ಬ ಗುತ್ತಿಗೆದಾರ ಸೇರಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಮಕ್ಕಳ ಆಹಾರ ವಿತರಣೆಯಲ್ಲಿ ಇವರು ಗೋಲ್‌ಮಾಲ್ ಮಾಡಿದ್ದಾರೆ. ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ. ಪ್ರಕರಣವನ್ನು ತಾನು ಗಂಭೀರವಾಗಿ ಪರಿಗಣಿಸಿದ್ದು ನಡೆದಿರುವ ಅವ್ಯವಹಾರವನ್ನುಯ ತನಿಖೆ ಮಾಡಿಸುತ್ತೇನೆ ಮತ್ತು ತಪ್ಪತಸ್ಥರಿಗೆ ಶಿಕ್ಷೆಯೂ ಆಗಬೇಕಿದೆ. ಬಡ ಮಕ್ಕಳಿಗೆ , ಮಹಿಳೆಯರಿಗೆ ಕೊಡಬೇಕಾದ ಫುಡ್ ವಿತರಣೆಯಲ್ಲಿ , ತಯಾರಿಕೆಯಲ್ಲಿ ಇವರು ಲೂಟಿ ಹೊಡೆಯುತ್ತಾರೆಂದ್ರೆ ಅದನ್ನು ಸಹಿಸಲು ಸಾಧ್ಯವೇ ಇಲ್ಲ. ಭೃಷ್ಟಾಚಾರವನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!