ಕರಾವಳಿ

ಸೌಜನ್ಯ ಪ್ರಕರಣ: ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು- ಸಂಚಲನ ಮೂಡಿಸಿದ ವಸಂತ ಬಂಗೇರ ಹೇಳಿಕೆ



ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರ ಹೇಳಿಕೆಯೊಂದು ಇದೀಗ ಸಂಚಲನ ಸೃಷ್ಟಿಸಿದೆ. ಸೌಜನ್ಯ ವಿಚಾರದಲ್ಲಿ ನ್ಯಾಯಕ್ಕಾಗಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆ ವಸಂತ ಬಂಗೇರ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದಲ್ಲಿ ನ್ಯಾಯ ಸಿಗಬಹುದು ಎಂಬ ನಂಬಿಕೆಯಿತ್ತು. ಆದರೆ ಸತ್ಯ ಹೊರಬಂದಿಲ್ಲ, ಸಿಬಿಐ ತನಿಖೆ ಹಳಿ ತಪ್ಪಿದ ವಿಚಾರ ಆಗಲೇ ಗೊತ್ತಾಗಿತ್ತು. ತನಿಖೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅದನ್ನು ಈಗ ಹೇಳುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಅದಕ್ಕೆ ಕಾಲ ಬರುತ್ತೆ. ಯಾರು ಇದನ್ನು ತಪ್ಪಿಸಿದ್ದಾರೆ, ಯಾರು ಅನ್ಯಾಯ ಮಾಡಿದ್ದಾರೆ, ಯಾರು ತೊಂದರೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು. ಇಲ್ಲವೆಂದರೆ ಎಲ್ಲವನ್ನೂ ಹೇಳುತ್ತೇನೆ, ನನ್ನ ಜೀವನದ ಅಂತ್ಯದೊಳಗೆ ಇದರ ಸತ್ಯ ಹೊರ ಬರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.

ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖಾಸಗಿಯಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಎಲ್ಲ ವಿಚಾರಗಳನ್ನು ಅವರಿಗೆ ತಿಳಿಸುತ್ತೇನೆ. ಅಧಿಕಾರಿಗಳು ಸೇರಿದಂತೆ ಇಂತವರನ್ನೇ ತನಿಖೆ ಮಾಡಬೇಕು ಎಂದು ಹೇಳುತ್ತೇನೆ. ಆಗ ಸತ್ಯ ಹೊರಬರುತ್ತೆ ಎಂಬ ವಿಚಾರವನ್ನು ಮುಂದಿಡುತ್ತೇನೆ. ನನ್ನ ಜೀವಿತ ಅವಧಿಯಲ್ಲಿಯೇ ಇದರ ಸತ್ಯ ಹೊರಬರುವುದನ್ನು ನೋಡುತ್ತೇನೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ತಪ್ಪು ಮಾಡಿದವರು ಯಾರೇ ಆಗಲಿ ಎಷ್ಟೇ ಪ್ರಭಾವಶಾಲಿಗಳಾಗಲಿ ಅವರಿಗೆ ಶಿಕ್ಷೆಯಾಗಬೇಕು. ಅವರನ್ನು ಕಾನೂನಿನ ಮುಂದೆ ತರಬೇಕು ಅದಕ್ಕಾಗಿ ಇಡೀ ಸಮಾಜ ಒಟ್ಟಾಗಿ ಧ್ವನಿಯೆತ್ತಬೇಕಾಗಿದೆ ಎಂದು ಅವರು ಹೇಳಿದರು. ಬಂಗೇರ ಅವರ ಹೇಳಿಕೆ ಭಾರಿ ವೈರಲ್ ಆಗಿದ್ದು ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.

Leave a Reply

Your email address will not be published. Required fields are marked *

error: Content is protected !!