ಪ್ರವಾಹಕ್ಕೆ ಸಿಲುಕಿದ್ದ ವೇಳೆ ಮರವೇರಿ ಕುಳಿತು ಪ್ರಾಣ ಉಳಿಸಿಕೊಂಡ ವ್ಯಕ್ತಿ..!
ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಯೋರ್ವರು ಸುಮಾರು 12 ಗಂಟೆಗಳ ಕಾಲ ಮರದ ಮೇಲೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದು, ಅವರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ ಮಹಾರಾಷ್ಟ್ರದ ಕೊಲ್ಹಾಪುರ-ಸಾಂಗ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ.

ಬಜರಂಗ ಖಾಮಕರ್ ಎಂಬವರು ನೀರಿಗೆ ಬಿದ್ದ ವ್ಯಕ್ತಿ. ಈ ವೇಳೆ ಪ್ರವಾಹದ ನೀರಿನಲ್ಲಿ ಸುಮಾರು 700 ಮೀಟರ್ ನಷ್ಟು ಹರಿದು ನದಿಯ ಮಧ್ಯದಲ್ಲಿರುವ ಮರಕ್ಕೆ ಅಪ್ಪಳಿಸಿದರು. ಈ ಸಮಯದಲ್ಲಿ, ಅವರು ಮರದ ಕೊಂಬೆಗಳ ಬೆಂಬಲದೊಂದಿಗೆ ಇಡೀ ರಾತ್ರಿ ಮರದ ಮೇಲೆ ಕುಳಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ರಾತ್ರಿ ಸಹಾಯಕ್ಕಾಗಿ ಕರೆದರೂ ಯಾರೂ ಬರಲಿಲ್ಲ. ಆದರೆ ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಹೊಲದಲ್ಲಿರುವ ಜನರು ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲಾ ಆಡಳಿತಕ್ಕೆ ಘಟನೆಯನ್ನು ತಿಳಿಸಿದರು. ಬಳಿಕ ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದ್ದು, ಸುಮಾರು 12 ಗಂಟೆಗಳ ಬಳಿಕ ಬೆಳಗ್ಗೆ 10.30ರ ವೇಳೆಗೆ ದೋಣಿಯ ಸಹಾಯದಿಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು ಎಂದು ತಿಳಿದು ಬಂದಿದೆ.