ಪುತ್ತೂರು: ಯತ್ನಾಳ್ ಭೇಟಿ ವೇಳೆ ಅಜಿತ್ ರೈಯನ್ನು ತಳ್ಳಿ ಹೊರದಬ್ಬಿದ ಪುತ್ತಿಲ ಬೆಂಬಲಿಗರು
ಪುತ್ತೂರು: ಬಿಜೆಪಿ ನಾಯಕರಿಬ್ಬರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪುತ್ತೂರು ಬಸ್ ನಿಲ್ದಾಣಣದ ಬಳಿ ಬ್ಯಾನರ್ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಮೇಲೆ ಪೊಲೀಸ್ ದೌರ್ಜನ್ಯ ನಡೆದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳನ್ನು ಭೇಟಿಯಾಗಲು ಬಿಜಾಪುರ ಶಾಸಕ, ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಮೇ.19ರಂದು ಪುತ್ತೂರು ಆಸ್ಪತ್ರೆಗೆ ಆಗಮಿಸಿದ್ದರು. ಯತ್ನಾಳ್ ಅವರು ಗಾಯಾಳುಗಳಿದ್ದ ಕೊಠಡಿಗೆ ಹೋಗುತ್ತಿದ್ದ ವೇಳೆ ಅವರ ಜೊತೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡ ಅಜಿತ್ ರೈ ಹೊಸಮನೆ ಮತ್ತಿತರ ಬಿಜೆಪಿಯವರನ್ನು ಗಾಯಾಳುಗಳಿದ್ದ ಕೊಠಡಿಗೆ ಹೋಗದಂತೆ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ತಡೆದಿದ್ದು ಆ ವಿಡಿಯೋ ವೈರಲ್ ಆಗಿದೆ.
ಯತ್ನಾಳ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆಯೇ ಘಟನೆ ನಡೆದಿದ್ದು ಬಿಜೆಪಿ ಮತ್ತು ಪುತ್ತಿಲ ಬೆಂಬಲಿಗರ ನಡುವಿನ ವೈಮನಸ್ಸು ಸ್ಪೋಟಗೊಂಡಂತಾಗಿದೆ. ಅಜಿತ್ ರೈ ಹೊಸಮನೆ ಅವರನ್ನು ಬಲವಂತವಾಗಿ ಎಳೆದು ಹೊರಹಾಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಪರ ವಿರೊಧ ಚರ್ಚೆಗೂ ಕಾರಣವಾಗಿದೆ.
ಪುತ್ತೂರಿನಲ್ಲಿ ಬಿಜೆಪಿ ಹಾಗೂ ಪುತ್ತಿಲ ಬೆಂಬಲಿಗರ ನಡುವಿನ ಶೀತಲ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಅದಾಗ್ಯೂ ಇಲ್ಲಿನ ಗೊಂದಲವನ್ನು ಬಗೆಹರಿಸುವುದಾಗಿ ಬಸನಗೌಡ ಯತ್ನಾಳ್ ಹೇಳಿದ್ದಾರೆ.