ಸುಬ್ರಹ್ಮಣ್ಯ: ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ದಾರುಣ ಮೃತ್ಯು
ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯ ಕಣ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ನೀರು ಪಾಲಾದ ಘಟನೆ ಇಂದು ಸಂಜೆ ವರದಿಯಾಗಿದೆ. ಸತತ ನಾಲ್ಕು ಗಂಟೆಯ ಕಾರ್ಯಚರಣೆಯ ಬಳಿಕ ಮೃತದೇಹ ಪತ್ತೆಯಾಗಿದೆ.

ಮೃತ ಬಾಲಕಿಯರನ್ನು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ ( 15.ವ ) ಮತ್ತು ಅವಂತಿಕಾ (11. ವ) ಎಂದು ತಿಳಿದು ಬಂದಿದೆ.
ಸತೀಶ್ ಅಮ್ಮಣ್ಣಾಯ ಅವರ ಮನೆಯಲ್ಲಿ ನಾಳೆ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಈ ಮಕ್ಕಳು ತಾಯಿಯೊಂದಿಗೆ ಇಂದು ಬೆಂಗಳೂರಿನಿಂದ ಆಗಮಿಸಿದ್ದರು. ಸಂಜೆ ವೇಳೆ ಸಹೋದರಿಯರು ಸ್ನಾನಕ್ಕೆಂದು ಹೊಳೆಗೆ ಹೋಗಿದ್ದರು. ಈ ವೇಳೆ ಒಬ್ಬಾಕೆ ನೀರಿನ ಸೆಳೆತಕ್ಕೆ ಸಿಲುಕಿದಾಗ ಮತ್ತೊಬ್ಬಾಕೆ ರಕ್ಷಿಸಲು ಹೋಗಿ ಇಬ್ಬರೂ ನೀರುಪಾಲಾಗಿರಬಹುದೆಂದು ಶಂಕಿಸಲಾಗಿದೆ.
ಘಟನೆಯ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.