ಕರಾವಳಿ

ಕಡಬ: ನರ ಹಂತಕ ಕಾಡಾನೆಯನ್ನು ಸೆರೆಹಿಡಿದ ಬೆನ್ನಲ್ಲೇ ಗ್ರಾಮಸ್ಥರ ಆಕ್ರೋಶ: ಕಲ್ಲು ತೂರಾಟ ; ಅಧಿಕಾರಿಗಳ ಮೇಲೆ ಹಲ್ಲೆ,ವಾಹನ ಜಖಂ

ಕಡಬ: ನರಹಂತಕ ಕಾಡಾನೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆಯೇ ಗ್ರಾಮಸ್ಥರು ಹಲ್ಲೆ ಮಾಡಿ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ ಘಟನೆ ನಡೆದಿದೆ.



ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಕಾಡಾನೆ ಇತ್ತೀಚೆಗೆ ಇಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52) ಮೃತಪಟ್ಟಿದ್ದರು.



ನರಹಂತಕ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಮೈಸೂರು ದುಬಾರೆಯಿಂದ 5 ಆನೆಗಳನ್ನು ತರಲಾಗಿತ್ತು. ಫೆ.21ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಡೋನ್ ಕ್ಯಾಮೆರಾವನ್ನು ಬಳಸಿ ನರಹಂತಕ ಆನೆಯನ್ನು ಪತ್ತೆ ಹಚ್ಚಿದ್ದು, ಫೆ.23ರಂದು (ಗುರುವಾರ) ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿತ್ತು.


ಆನೆಯನ್ನು ಹಿಡಿದು ತೆರಳುತ್ತಿದ್ದಾಗ “ನಮ್ಮ ಗ್ರಾಮದ ಕಾಡಿನ ಭಾಗದಲ್ಲಿ ಒಂದಲ್ಲ, ಇಂಥ ಹಲವು ಆನೆಗಳಿವೆ. ಅವೆಲ್ಲವನ್ನೂ ಸೆರೆ ಹಿಡಿಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.



ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ವಾಹನ ಜಖಂಗೊಂಡಿವೆ ಎಂದು ತಿಳಿದು ಬಂದಿದೆ. ಡಿವೈಎಸ್ಪಿ ಅವರ ವಾಹನ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿವೆ.

Leave a Reply

Your email address will not be published. Required fields are marked *

error: Content is protected !!