ಡಾ.ರೇಣುಕಾ ಪ್ರಸಾದ್ ಹೇಳಿಕೆ ಸತ್ಯಕ್ಕೆ ದೂರವಾದದ್ದು: ಪತ್ರಿಕಾಗೋಷ್ಠಿಯಲ್ಲಿ ಡಾ. ಚಿದಾನಂದ ಸ್ಪಷ್ಟನೆ: ಪ್ರತಿಭಟನೆ ನಡೆಸಲು ಮುಂದಾದರೆ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ..!
ಸುಳ್ಯದ ಅಮರಶಿಲ್ಪಿ ಡಾಕ್ಟರ್ ಕುರುಂಜಿ ವೆಂಕಟರಮಣ ಗೌಡರು ಹುಟ್ಟು ಹಾಕಿರುವ ಕೆ ವಿ ಜಿ ಯ ಎಲ್ಲಾ ವಿದ್ಯಾ ಸಂಸ್ಥೆಗಳು ಯಾವುದೇ ಗೊಂದಲಗಳಿಲ್ಲದೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ.
ಡಾ. ರೇಣುಕಾಪ್ರಸಾದರು ಡಿ.20ರಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದ್ದು ದುರುದ್ದೇಶದಿಂದ ಕೂಡಿದೆ.
ಡಿ.23 ರಂದು ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಅವರ ಮಾತುಗಳು ಕಾನೂನು ಬಾಹಿರವಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಡಾI ಚಿದಾನಂದ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.

ಡಿಸೆಂಬರ್ 21ರಂದು ಕೆವಿಜಿ ಆಯುರ್ವೇದಿಕ್ ಕಾಲೇಜಿನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಾI ರೇಣುಕಾ ಪ್ರಸಾದ್ ರವರ ಪತ್ರಿಕಾಗೋಷ್ಠಿಗೆ ಪ್ರತ್ಯುತ್ತರವನ್ನು ನೀಡಿ ಮಾತನಾಡಿದ ಅವರು
ಸಂಸ್ಥೆಗೆ ಸಂಬಂಧಿಸಿದ ವಿಷಯವನ್ನು ಯಾವುದೇ ಒಬ್ಬ ವ್ಯಕ್ತಿ ನಿರ್ಣಯವನ್ನು ತೆಗೆದುಕೊಂಡು ಮಾಡುವಂತಹದ್ದಲ್ಲ. ಅದಕ್ಕೆ ಅದರದೇ ಆದ ಕಮಿಟಿ ಮತ್ತು ಪದಾಧಿಕಾರಿಗಳು ಸದಸ್ಯರುಗಳು ಒಳಗೊಂಡಿರುತ್ತಾರೆ. ಅಲ್ಲದೆ ಅದರದೇ ಆದ ಬೈಲಾಗಳು ಇರುತ್ತದೆ. ಆದ್ದರಿಂದ ಒಂದು ಸಂಸ್ಥೆಯ ವಿರುದ್ಧವಾಗಿ ಈ ರೀತಿ ವರ್ತಿಸುವುದು ಅವರ ದುರುದ್ದೇಶ ಭಾವನೆಯಿಂದಾಗಿ ಆಗಿರುತ್ತದೆ ಎಂದು ಹೇಳಿದರು.
ನಮ್ಮ ವಿದ್ಯಾಸಂಸ್ಥೆಗಳು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು ಯಾರೂ ಕೂಡ ಗೊಂದಲ ಪಡುವಂತಹ ಅವಶ್ಯಕತೆ ಇಲ್ಲ. ವಿದ್ಯಾಸಂಸ್ಥೆಗಳ, ವಿದ್ಯಾರ್ಥಿಗಳ, ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಪೋಷಕರ ಯಾವುದೇ ರೀತಿಯ ಕುಂದು ಕೊರತೆಗಳನ್ನು ಹೋಗಲಾಡಿಸಲು ನಮ್ಮ ಆಡಳಿತ ಮಂಡಳಿ ಸಂಪೂರ್ಣ ಬದ್ಧವಾಗಿದೆ.
ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದ್ದು, ಸಂಬಂಧಿತ ಯಾವುದೇ ಸಿಬ್ಬಂದಿಗಳು ಈ ರೀತಿಯ ಕೃತ್ಯಗಳಿಗೆ ಭಾಗವಹಿಸಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ನಾವು ಸಿದ್ದರಾಗಿದ್ದೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರ ಡಾ| ರೇಣುಕಾ ಪ್ರಸಾದರ ವೈಯಕ್ತಿಕ ನಿರ್ಧಾರ. ಸಂಸ್ಥೆಯ ಸಿಬ್ಬಂದಿಗಳನ್ನು ಸಂಸ್ಥೆಯ ವಿರುದ್ಧವೇ ಎತ್ತಿ ಕಟ್ಟಿ ಕಾನೂನು ಬಾಹಿರ ಕೆಲಸಕ್ಕೆ ಅವರು ಮುಂದಾಗಿದ್ದಾರೆ. ನ್ಯಾಯಾಲಯದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಮೆಚ್ಚಿ ಆಡಳಿತ ಮಂಡಳಿಯು ತೆಗೆದುಕೊಂಡಿರುವ ನಿರ್ಣಯಗಳನ್ನು ಅಂಗೀಕರಿಸಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಡಾ| ರೇಣುಕಾಪ್ರಸಾದರನ್ನು ಪ್ರಧಾನ ಕಾರ್ಯದರ್ಶಿಯಿಂದ ತೆರವು ಮಾಡಲಾಗಿದೆ ಎಂಬ ಮಾತಿಗೆ ಉತ್ತರವನ್ನು ನೀಡಿರುವ ಅವರು ಸಭೆಗೆ ಕರೆದಾಗ ಬಾರದೆ ಅವರೇ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆಸಕ್ತಿ ಇದ್ದಿದ್ದರೆ ಮಹಾಸಭೆಯಲ್ಲಿ ಭಾಗವಹಿಸಿ ಚುನಾವಣೆಯನ್ನು ಎದುರಿಸಿ ಅವರಿಗೆ ಪ್ರಧಾನ ಕಾರ್ಯದರ್ಶಿಯೂ ಅಥವಾ ಅಧ್ಯಕ್ಷರೇ ಆಗಬಹುದಿತ್ತು. ಅದಕ್ಕೆ ಅವರು ಯಾತಕ್ಕಾಗಿ ಪ್ರಯತ್ನಿಸಿಲ್ಲ ಎಂದು ಕೇಳಿದರು. ಡಾ| ಜ್ಯೋತಿ ಆರ್ ಪ್ರಸಾದ್ ಮತ್ತು ಡಾ| ಅಭಿಜ್ಞಾ ಪ್ರಸಾದ್ರವರು ಕೂಡಾ ಸಭೆಗೆ ಬಾರದೇ ಇರುವುದರಿಂದ ಅಕಾಡೆಮಿಯ ವಾರ್ಷಿಕ ಮಹಾಸಭೆಯ ನಿರ್ಣಯದಂತೆ ನಿರ್ದೇಶಕ ಸ್ಥಾನದಿಂದ ಕೈ ಬಿಡಲಾಗಿದ್ದು ಅವರು ಅಜೀವ ಸದಸ್ಯತ್ವವನ್ನು ಪಡೆದಿರುವ ಹಿನ್ನೆಲೆಯಲ್ಲಿ ಅವರಿಬ್ಬರೂ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಅಕಾಡೆಮಿಯಲ್ಲಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಇದ್ದವರು ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸೊಸೈಟಿ ಆಕ್ಟ್ ಪ್ರಕಾರ ನಡೆಯುವ ಸಂಸ್ಥೆ ಎಂದು ಒಪ್ಪಿರುವ ಅವರು ಸಂಸ್ಥೆ ಒಬ್ಬ ವ್ಯಕ್ತಿಯ ಆಸ್ತಿ ಅಲ್ಲ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.ಕಾನೂನು ಮೀರಿ ಅವ್ಯವಹಾರಕ್ಕೆ ಅವರು ಮುಂದಾದಾಗ ಅದನ್ನು ನಾವು ತಡೆದಿದ್ದೇವೆ ಎಂದು ಹೇಳಿದರು.
ಅಕಾಡೆಮಿ ಕಾರ್ಯದರ್ಶಿ ಕೆ.ವಿ. ಹೇಮನಾಥರು ಮಾತನಾಡಿ ಅಕಾಡೆಮಿಯ ತುರ್ತು ಸಭೆ ನಡೆಸಬೇಕೆಂದು ರೇಣುಕಾಪ್ರಸಾದರು ನನ್ನ ಮನೆಗೆ ಬಂದು ಬಲವಂತ ಮಾಡಿದ್ದರು. ಆದರೆ ಅವರ ಉದ್ದೇಶ ಏನೆಂದು ನನಗೆ ಗೊತ್ತಿರಲಿಲ್ಲ. ಅವರ ಒತ್ತಾಯದ ಮೇರೆಗೆ ಸಭೆಗೆ ಬಂದಾಗ ಸಭೆಯಲ್ಲಿ ಅವರು, ಡಾ| ಜ್ಯೋತಿ ಪ್ರಸಾದ್, ಡಾ| ಅಭಿಜ್ಞಾ ಮತ್ತು ನಾನು ಇದ್ದೆವು. ಕೊರೊನಾ ಸಂದರ್ಭವಾಗಿರುವುದರಿಂದ ವೇತನ ಪಾವತಿಯ ವಿಚಾರ ಮುಂದಿಟ್ಟು,ನಿರ್ಣಯಗಳನ್ನು ಬರೆಯದೇ ಖಾಲಿ ಪುಸ್ತಕಕ್ಕೆ ನನ್ನಿಂದ ಸಹಿ ಮಾಡಲು ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ.ಬಳಿಕ ಅಜೆಂಡಾದಲ್ಲಿ ಇಲ್ಲದ ವಿಚಾರವನ್ನು ನಿರ್ಣಯದಲ್ಲಿ ಬರೆದಿದ್ದು ಇದೆಲ್ಲವೂ ನಮಗೆ ಗೊತ್ತಾಗಿ ಅದನ್ನು ನಾವು ತಡೆದಿದ್ದೇವೆ ಎಂದು ಹೇಳಿದ ಅವರು, ಇಲ್ಲಿಯ ಎಲ್ಲ ವ್ಯವಹಾರ ನಾನೇ ನಡೆಸಬೇಕೆಂಬ ಉದ್ದೇಶ ರೇಣುಕಾಪ್ರಸಾದರದ್ದಾಗಿತ್ತು. ಆದರೆ ಅದು ಕಾರ್ಯಗತವಾಗಿಲ್ಲ.
ಅಲ್ಲಿಂದ ಸಮಸ್ಯೆಗಳು ಆರಂಭವಾದವು.ನ್ಯಾಯಾಲಯದ ಮೆಟ್ಟಿಲು ಮೊದಲು ಹತ್ತಿದವರು ಅವರೇ.
ಎಲ್ಲಾ ಕಡೆ ಅವರಿಗೆ ಅವಗುಣಗಳೇ ಆಗಿದೆ ಹೊರತು ನಮ್ಮ ವ್ಯವಹಾರಗಳು ನ್ಯಾಯ ಸಮ್ಮತವಾಗಿರುವುದರಿಂದ ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಎಂದು ಹೇಳಿದರು.
ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಾತನಾಡಿ ಅವರ ಪತ್ರಿಕಾಗೋಷ್ಠಿಯ ವಿಚಾರಗಳೆಲ್ಲ ಸತ್ಯಕ್ಕೆ ದೂರವಾದುದು. ಯಾಕೆಂದರೆ ಅವರು ಹೇಳಿರುವಂತೆ ಕೊರೊನಾ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಸೀಟುಗಳು ಏನು ಖಾಲಿ ಇರಲಿಲ್ಲ.ಎಲ್ಲಾ ಸೀಟು ಫುಲ್ ಆಗಿತ್ತು.
ಒಂದು ತಿಂಗಳ ಹಿಂದೆ ಬಂದು ನನಗೆ 3 ಕೋಟಿ ಕೊಡಬೇಕು ಎಂದರೆ ಹೇಗೆ? ಎಂದು ಪ್ರಶ್ನಿಸಿದರಲ್ಲದೆ, 50 ಕೋಟಿ ರೂ ನಮ್ಮ ಸುಪರ್ದಿಗೆ ಬಳಸಿಕೊಳ್ಳಲು ಹುನ್ನಾರ ಎನ್ನುವುದು ಶುದ್ಧ ಸುಳ್ಳು. ಇಂದಿಗೂ ಆ ಹಣ ಬ್ಯಾಂಕಿನಲ್ಲಿ ಭದ್ರವಾಗಿದೆ.
ನನಗೆ ಇದರಿಂದ ಆಗಬೇಕೆಂದೇನೂ ಇಲ್ಲ. ನನ್ನ ವ್ಯವಹಾರವನ್ನು ಗೂಗಲ್ನಲ್ಲಿ ನೋಡಿದರೆ ಡೀಟೇಲ್ ಸಿಗುತ್ತದೆ. ನಾನು ಕಲಿತಿರುವ ಆರ್ಕಿಟೆಕ್ಟ್ ವಿದ್ಯೆಯಿಂದ ನನ್ನ ಉದ್ಯಮವನ್ನು ಬೆಳೆಸುತ್ತಾ ಬಂದಿದ್ದೇನೆ. ನನ್ನ ಅವಶ್ಯಕತೆಗೆ ಈ ಸಂಸ್ಥೆಯ ಹಣವನ್ನು ಪಡೆದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಇವರು ಮಾಡುವ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು, ಇದನ್ನು ಕಾನೂನು ಪ್ರಕಾರ ನೋಡಿಕೊಳ್ಳುವೆ ಎಂದು ಅವರು ಹೇಳಿದರು.
ನಾವು ಯಾರಿಗೂ ಕೂಡ ತೊಂದರೆಗಳನ್ನು ನೀಡುವಂತಹ ಪತ್ರಗಳನ್ನು ಕಳುಹಿಸಲಿಲ್ಲ. ಸಭೆಗೆ ಹಾಜರಾಗುವಂತೆ ಮತ್ತು ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಭಾಗವಹಿಸುವಂತೆ ಮಾತ್ರ ಪತ್ರಗಳನ್ನು ಕೊಟ್ಟಿದ್ದೇವೆ. ಆದರೆ ಅದನ್ನು ಅವರು ವಿನಾಕಾರಣ ನಾವು ಪತ್ರದ ಮೇಲೆ ಪತ್ರವನ್ನು ಕೊಟ್ಟು ಅವರಿಗೆ ತೊಂದರೆಯನ್ನು ನೀಡಿದ್ದೇವೆ ಎಂದು ಹೇಳುವುದು ಶುದ್ಧ ಸುಳ್ಳು. ಬೇಕಿದ್ದರೆ ನಾವು ಕಳಿಸಿರುವಂತಹ ಪತ್ರಗಳನ್ನು ಅವರು ತೋರಿಸಲಿ ಅದರಲ್ಲಿ ಏನು ಬರೆದಿದೆ ಎಂಬುವುದು ಎಲ್ಲರಿಗೂ ತಿಳಿಯುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ್, ನಿರ್ದೇಶಕರಾದ ಜಗದೀಶ್ ಅಡ್ತಲೆ, ಕಾನೂನು ಸಲಹೆಗಾರ ಪ್ರದೀಪ್ ಕೆ.ಎಲ್., ಧನಂಜಯ ಮದುವೆಗದ್ದೆ ಉಪಸ್ಥಿತರಿದ್ದರು.