ಕುವೈಟ್ಗೆ ಉದ್ಯೋಗಕ್ಕೆ ತೆರಳಿದ್ದ ಪುತ್ತೂರಿನ ಮಹಿಳೆಗೆ ಹಿಂಸೆ ದಲಿತ ಮುಖಂಡರೊಬ್ಬರಿಗೆ ಮೊಬೈಲ್ ವಾಯ್ಸ್ ಮೆಸೇಜ್
ಪುತ್ತೂರು:ಪುತ್ತೂರಿನ ಮಹಿಳೆಯೊಬ್ಬರು ಉದ್ಯೋಗ ನಿಮಿತ್ತ ಕುವೈಟ್ಗೆ ತೆರಳಿದ್ದು ಅಲ್ಲಿ ಅವರನ್ನು ಸಂಸ್ಥೆಯೊಂದು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಕುರಿತು ಮಹಿಳೆಯು ಪುತ್ತೂರಿನ ದಲಿತ್ ಸೇವಾ ಸಮಿತಿ ಮುಖಂಡರೊಬ್ಬರಿಗೆ ಮೊಬೈಲ್ ವಾಯ್ಸ್ ಕಳುಹಿಸಿದ್ದಾರೆ.

ತಮಿಳು ಮೂಲದವರಾಗಿದ್ದು ಉರ್ಲಾಂಡಿಯಲ್ಲಿ ವಾಸ್ತವ್ಯವಿದ್ದ ನಾಗಮ್ಮ ಎಂಬವರು 10 ತಿಂಗಳ ಹಿಂದೆ ಉದ್ಯೋಗಕ್ಕೆಂದು ಏಜೆನ್ಸಿಯ ಮೂಲಕ ಕುವೈಟ್ಗೆ ತೆರಳಿದ್ದರು.ಅಲ್ಲಿ ಅವರಿಗೆ ಆರೋಗ್ಯದ ಸಮಸ್ಯೆ ಆದಾಗ ಅಲ್ಲಿನ ಸಂಸ್ಥೆಯುವರು ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿರುವುದಾಗಿ ನಾಗಮ್ಮರವರು ಪುತ್ತೂರಿನ ದಲಿತ್ ಸೇವಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರಿಕ್ಕಾಡು ಅವರ ಮೊಬೈಲ್ಗೆ ವಾಯ್ಸ್ ಮೆಸೇಜ್ ಮಾಡಿದ್ದಾರೆ.
ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನಗೆ ಸರಿಯಾದ ಔಷಧ ನೀಡುತ್ತಿಲ್ಲ ಮತ್ತು ಅನಾರೋಗ್ಯ ಇದ್ದರೆ ವಿದೇಶಕ್ಕೆ ಯಾಕೆ ಬಂದದ್ದು ಎಂದು ಬೆದರಿಸಿ ಕೋಣೆಯೊಳಗೆ ಕೂಡಿ ಹಾಕಿದ್ದಾರೆ.ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ನೀಡುತ್ತಿದ್ದಾರೆ.ನನ್ನೊಂದಿಗೆ ಶ್ರೀಲಂಕಾದ ಮಹಿಳೆಯರೂ ಇದ್ದಾರೆ’ ಎಂದು ವಾಯ್ಸ್ ಮೆಸೇಜ್ನಲಿ ತಿಳಿಸಿದ್ದಾರೆ ಎಂದು ಅಣ್ಣಪ್ಪ ಕಾರೆಕಾಡು ತಿಳಿಸಿದ್ದಾರೆ.
ಏಜೆನ್ಸಿ ಕರೆ ಸ್ವೀಕರಿಸುತ್ತಿಲ್ಲ: ದಿ.ಪಾಂಡಿಯನ್ ಎಂಬವರ ಪತ್ನಿ ನಾಗಮ್ಮ ಅವರು ಪುತ್ತೂರು ಬೊಳುವಾರು ಉರ್ಲಾಂಡಿಯಲ್ಲಿ ಮನೆ ಮಾಡಿಕೊಂಡಿದ್ದು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದಾರೆ.ಅವರ ಪುತ್ರಿಗೆ ವಿವಾಹವಾಗಿದೆ.ಪುತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ನಾಗಮ್ಮ ಅವರಿಗೆ ವಿದೇಶಕ್ಕೆ ತೆರಳಲು ವಿಸಾ ಮಾಡಿಕೊಟ್ಟ ಏಜೆನ್ಸಿಯವರು ಇದೀಗ ಕರೆ ಸ್ವೀಕರಿಸುತ್ತಿಲ್ಲ. ಹಾಗಾಗಿ ಪೊಲೀಸರಿಗೆ ಈ ಕುರಿತು ದೂರು ನೀಡುವುದಾಗಿ ಅಣ್ಣಪ್ಪ ಕಾರಿಕ್ಕಾಡು ತಿಳಿಸಿದ್ದಾರೆ.