ವಿಟ್ಲ: ಪೆಟ್ರೋಲ್ ಸುರಿದು ಯುವಕನ ಕೊಲೆ ಪ್ರಕರಣ: ಬೆಂಗಳೂರಿನಿಂದ ಊರಿಗೆ ಬಂದಿಳಿದಾಗ ಕಿಡ್ನಾಪ್.!?
ವಿಟ್ಲ: ಯುವಕ ಸಮದ್ ಕೊಲೆ ಪ್ರಕರಣದ ಒಂದೊಂದೇ ವಿಚಾರಗಳು ಹೊರ ಬರುತ್ತಿದ್ದು ಇತ್ತೀಚೆಗಷ್ಟೇ ಬೆಂಗಳೂರಿಗೆ ತೆರಳಿದ್ದ ಸಮದ್ ಊರಿಗೆ ಬಂದು ಮನೆಗೆ ಹೋಗುವ ಮುನ್ನವೇ ಆದ್ರಾಮ ಎಂಬಾತ ಸಮದ್ ನನ್ನು ಅಪಹರಿಸಿ ಗುಡ್ಡಕ್ಕೆ ಕರೆದೊಯ್ದಿದ್ದ ಎನ್ನುವ ಸುದ್ದಿ ಹಬ್ಬಿದೆ.

ಪರಿಚಿತ ಎನ್ನುವ ಕಾರಣಕ್ಕೆ ಸಮದ್ ಅವರು ಅದ್ರಾಮನ ಜೊತೆ ಹೋಗಿದ್ದು ಆ ಬಳಿಕ ಕೊಲೆ ನಡೆಯಲು ಏನು ಕಾರಣ ಎನ್ನುವ ವಿಚಾರ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಘಟನೆ ವಿವರ: ಸಮದ್ ಎಂಬ ಯುವಕನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ನ.8ರಂದು ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೊಳಂತರೂ ನಿವಾಸಿ, ಆಟೋ ರಿಕ್ಷಾ ಚಾಲಕ ಅದ್ದು ಯಾನೆ ಅದ್ರಾಮ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಿಬೈಲ್ ನಿವಾಸಿ, ಸುಮಾರು 19 ವರ್ಷ ಪ್ರಾಯದ ಸಮದ್ ಯಾನೆ ಚಪ್ಪಿ ಎಂಬ ಯುವಕನನ್ನು ಇರಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ರವಿವಾರ ನಡೆದಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಮದ್ ಎರಡು ದಿನಗಳಿಂದ ನಾಪತ್ತೆಯಾಗಿದ್ದರು.