ಕಾರಿಗೆ ಒರಗಿ ನಿಂತಿದ್ದ ಬಾಲಕನ ಎದೆಗೆ ಝಾಡಿಸಿ ಒದ್ದ ವ್ಯಕ್ತಿ
ತಲಶ್ಶೇರಿ: ತನ್ನ ಕಾರಿಗೆ ಒರಗಿ ನಿಂತಿದ್ದ ಆರು ವರ್ಷದ ಬಾಲಕನ ಎದೆಗೆ ಝಾಡಿಸಿ ಒದ್ದ ಕಣ್ಣೂರಿನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ಕೇರಳದ ತಲಶ್ಶೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
![](http://newsbites.in/wp-content/uploads/2022/11/IMG_20221104_161646-1024x421.jpg)
ವಾಹನ ದಟ್ಟಣೆಯ ರಸ್ತೆಯೊಂದರ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಒರಗಿ ನಿಂತಿದ್ದ ಬಾಲಕನನ್ನು ನೋಡಿದಾಕ್ಷಣ ಕಾರಿನ ಚಾಲಕ ಬಾಲಕನ್ನು ತುಳಿದ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕ ಘಟನೆಯ ನಂತರ ಮೌನವಾಗಿ ಅತ್ತ ಸಾಗುತ್ತಿದ್ದಂತೆ ಆ ವ್ಯಕ್ತಿ ಕಾರಿನೊಳಗೆ ಕುಳಿತುಕೊಳ್ಳುತ್ತಾನೆ.
ಈ ಘಟನೆಯನ್ನು ಗಮನಿಸಿದ ಕೆಲ ಸ್ಥಳೀಯರು ತಕ್ಷಣ ಕಾರಿನ ಬಳಿ ಬಂದು ಆತನ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕುತ್ತಾರೆ. ಪರಿಸ್ಥಿತಿ ಕೈಮೀರಲಿದೆ ಎಂದು ತಿಳಿಯುತ್ತಲೇ ಆ ವ್ಯಕ್ತಿ ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ತೆರಳಿದ್ದ ಎಂದು ವರದಿಯಾಗಿದೆ.
ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಅದೇ ದಿನ ವಶಕ್ಕೆ ಪಡೆದುಕೊಂಡಿದ್ದರು. ಆತನನನ್ನು ಪೊನ್ನಿಯಂಪಲಂ ನಿವಾಸಿ ಶಿಹಶದ್ ಎಂದು ಗುರುತಿಸಲಾಗಿದೆ.
ಘಟನೆಯ ಪ್ರತ್ಯಕ್ಷಸಾಕ್ಷಿಯೊಬ್ಬರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತಾದರೂ ಆತನನ್ನು ನಂತರ ಬಿಡುಗಡೆಗೊಳಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.