ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಟಿ ರಮ್ಯಾ ಅವರಿಗೆ ಕೆನ್ನೆಗೆ ಬಾರಿಸಿ ಸ್ವಾಗತಿಸಿದ ಡಿ.ಕೆ ಶಿವಕುಮಾರ್

ರಾಯಚೂರು: ಭಾರತ್ ಜೋಡೋ ಪಾದಯಾತ್ರೆಯ ಕೊನೆಯ ಕ್ಷಣದಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರು ಆಗಮಿಸಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರೀತಿಯಿಂದ ರಮ್ಯಾ ಕೆನ್ನೆಗೆ ಬಾರಿಸಿ, ನಗುತ್ತಲೇ ರಮ್ಯಾ ಅವರನ್ನು ಅಪ್ಪಿಕೊಂಡು ಯಾತ್ರೆಗೆ ಸ್ವಾಗತಿಸಿದರು.
ರಮ್ಯಾ ಅವರನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿ ರಮ್ಯಾ, ರಮ್ಯಾ ಎಂದು ಕೂಗಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ ರಾಯಚೂರಿನತ್ತ ಸಾಗುವಾಗ ರಾಹುಲ್ ಗಾಂಧಿ ಜೊತೆ ರಮ್ಯಾ ಹೆಜ್ಜೆ ಹಾಕಿ ಗಮನ ಸೆಳೆದರು.ಕೆಲ ಹೊತ್ತು ರಾಹುಲ್ ಗಾಂಧಿ ರಮ್ಯಾ ಕೈ ಹಿಡಿದು ಯಾತ್ರೆಯಲ್ಲಿ ಮುಂದೆ ಸಾಗಿದ್ದಾರೆ.ಸುಮಾರು ಎರಡು ಕಿಲೋಮೀಟರ್ ನಷ್ಟು ರಮ್ಯಾ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ರಮ್ಯಾ ಅವರು ಬಂದ ಹಿನ್ನಲೆಯಲ್ಲಿ ಜನರು ನೂಕಾಟ ತಳ್ಳಾಟ ಮಾಡುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿಯೊಬ್ಬರು ಕಾರ್ಯಕರ್ತರನ್ನು ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 18 ದಿನ ಪೂರ್ಣಗೊಂಡಿದ್ದು, ರಾಹುಲ್ ಗಾಂಧಿ ಇಂದು ತೆಲಂಗಾಣ ಪ್ರವೇಶ ಮಾಡಿದರು. ಬೆಳಗ್ಗೆ 6 ಗಂಟೆಗೆ ಯರಮರಸ್ ನಿಂದ ಪಾದಯಾತ್ರೆ ಆರಂಭಗೊಂಡಿತು. 8.25 ಕ್ಕೆ ತೆಲಂಗಾಣ ಪ್ರವೇಶ ಮಾಡಿತು.
ಹೈದರಾಬಾದ್ ನಿಂದ ವಿಮಾನದಲ್ಲಿ ರಾಹುಲ್ ಗಾಂಧಿ ದೆಹಲಿಗೆ ಇಂದು ತೆರಳಲಿದ್ದು, ದೀಪಾವಳಿ ಹಬ್ಬದ ಕಾರಣ ಪಾದಯಾತ್ರೆ ಎರಡು ದಿನಗಳ ಕಾಲ ಬಿಡುವು ಇರಲಿದೆ.