ವಿಟ್ಲ: ಅಕ್ರಮ ಸ್ಫೋಟಕ ಸಂಗ್ರಹ- ವ್ಯಕ್ತಿ ಪೊಲೀಸ್ ವಶಕ್ಕೆ
ವಿಟ್ಲ: ಸುಡುಮದ್ದು ತಯಾರಿಕೆಗಾಗಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಮನೆಯ ಆವರಣದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಶೇಖರಿಸಿಟ್ಟಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಕಂಬಳಬೆಟ್ಟು ಸಮೀಪದ ಅಮೈ ಎಂಬಲ್ಲಿ ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಎಂಬವರು ಸುಡುಮದ್ದು ತಯಾರಿಸುತ್ತಿದ್ದು, ಅದಕ್ಕೆ ಬಳಸುವ ಅಪಾಯಕಾರಿ ಸ್ಫೋಟಕಗಳನ್ನು ಮನೆಯ ಆವರಣದಲ್ಲಿ ಶೇಖರಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಎ.13ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ. ಎಸ್. ನಾಯಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರಕ್ಷಣೆ ಅಥವಾ ಪರವಾನಗಿ ಇಲ್ಲದೆ ದಾಸ್ತಾನು ಮಾಡಲಾಗಿದ್ದ ಸುಮಾರು 1.9 ಕೆ.ಜಿ ತೂಕದ ಸ್ಫೋಟಕದಂತಹ ಸಂಶಯಾಸ್ಪದ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರ ಜೀವಕ್ಕೆ ಅಪಾಯವಾಗುವಂತೆ ನಿರ್ಲಕ್ಷ್ಯದಿಂದ ಸ್ಫೋಟಕ ಶೇಖರಿಸಿದ ಆರೋಪದ ಮೇಲೆ ಜಗದೀಶ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



