ಪರಿಶಿಷ್ಠ ಪಂಗಡಗಳ ಕಾಲನಿ ಅಭಿವೃದ್ದಿಗೆ ಒಂದು ಕೋಟಿ ಅನುದಾನ:
ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಠ ಪಂಗಡಗಳ ಕಾಲನಿ ಅಭಿವೃದ್ದಿಗೆ ಸರಕಾರ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ, ಕಾಲನಿ ಅಭಿವೃದ್ದಿಗೆ ಸರಕಾರ ವಿಶೇಷ ಅನುದಾನ ನೀಡಬೇಕೆಂದು ಕೋರಿ ಶಾಸಕ ಅಶೋಕ್ ರೈ ಮನವಿ ಮಾಡಿದ್ದು ಈ ಮನವಿಗೆ ಸರಕಾರ ಸ್ಪಂದನೆ ನೀಡಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಪ.ಪಂಗಡ ಕಾಲನಿಗಳಿದ್ದು ಬಹುತೇಕ ಕಾಲನಿಗಳು ಅಭಿವೃದ್ದಿ ಶೂನ್ಯವಾಗಿದೆ. ಕಾಲನಿಗೆ ತೆರಳುವ ರಸ್ತೆಯು ಸಮರ್ಪಕವಾಗಿಲ್ಲ ಮತ್ತು ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಚುನಾವಣಾ ಸಮಯದಲ್ಲಿ ಕಾಲನಿಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕರು ಕಾಲನಿ ನಿವಾಸಿಗಳಿಗೆ ಕಾಲನಿ ಅಭಿವೃದ್ದಿ ಮಾಡುವ ಭರವಸೆಯನ್ನು ನೀಡಿದ್ದರು. ಈ ಹಿಂದೆಯೂ ಕಾಲನಿಗಳ ಅಭಿವೃದ್ದಿಗೆ ಶಾಸಕರು ಅನುದಾನವನ್ನು ಒದಗಿಸಿದ್ದರು. ಆದರೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕೆಂದು ಪರಿಶಿಷ್ಠ ಪಂಗಡ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಒಂದು ಕೋಟಿ ಅನುದಾನದಿಂದ ಕಾಲನಿಗಳ ರಸ್ತೆಯನ್ನು ಅಭಿವೃದ್ದಿ ಮಾಡಲಾಗುತ್ತದೆ. ಹೆಚ್ಚಿನ ಕಾಲನಿಗಳು ಎತ್ತರ ಪ್ರದೇಶದಿಂದ ಕೂಡಿರುವ ಕಾರಣ ಮಳೆಗಾಲದಲ್ಲಿ ಸಂಚಾರಕ್ಕೆ ಕಷ್ಟಕರವಾಗುತ್ತಿತ್ತು. ಕಾಲನಿಗಳ ಸಮಸ್ಯೆಯ ಬಗ್ಗೆ ನಿಯೋಗವೊಂದು ಶಾಸಕರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಇದೀಗ ಒಂದು ಕೋಟಿ ಹೆಚ್ಚುವರಿ ಅನುದಾನದಿಂದ ಕಾಲನಿಗಳ ಬಹುತೇಕ ರಸ್ತೆಗಳು ಅಭಿವೃದ್ದಿ ಹೊಂದಲಿದೆ.





