ವಿಟ್ಲ: ಕೆಂಪು ಕಲ್ಲು ಅಕ್ರಮ ಸಾಗಾಟ, ಚಾಲಕರ ಸಹಿತ ಎರಡು ಲಾರಿಗಳು ಪೊಲೀಸ್ ವಶಕ್ಕೆ
ವಿಟ್ಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ಸ್ವಾಧೀನಪಡಿಸಿಕೊಂಡು, ಅವುಗಳ ಚಾಲಕರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಮಧ್ಯಾಹ್ನ ವಿಟ್ಲ ಪೊಲೀಸರಿಗೆ ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ ಬಂಟ್ವಾಳ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಎರಡು ಲಾರಿಗಳನ್ನು ತಡೆದು, ಲಾರಿ ಚಾಲಕನನ್ನು ವಿಚಾರಿಸಲಾಗಿತ್ತು.
ವಿಟ್ಲನಿವಾಸಿ ಸಾಧಿಕ್ (25) ಹಾಗೂ ವಿಟ್ಲ ನಿವಾಸಿ ಮುಹಮ್ಮದ್ (46)ರನ್ನು ವಿಚಾರಿಸಿದಾಗ ಕೆಂಪು ಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ತುಂಬಿಸಿ ಕಳುಹಿಸಿಕೊಟ್ಟಿರುವುದಾಗಿ ಹಾಗೂ ಈ ಬಗ್ಗೆ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲ ಎಂಬುದಾಗಿ ಪರಿಶೀಲನೆಯ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಲ್ಲು ಲೋಡ್ಗಳ ಸಹಿತ ಲಾರಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





