ವಿಟ್ಲ: ಅಕ್ರಮ ಕೆಂಪುಕಲ್ಲು ಸಾಗಾಟ, ಲಾರಿ ವಶಕ್ಕೆ
ಪುತ್ತೂರು: ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ವಶಪಡಿಸಿದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿ.4ರಂದು ಬೆಳಿಗ್ಗೆ ಕೊಳ್ನಾಡು ಗ್ರಾಮದ ಕೂಡ್ತಮುಗೇರು ಎಂಬಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ರತ್ನಕುಮಾರ್ ಅವರು ಠಾಣಾ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುವ ವೇಳೆ, ಬೋಳ್ಪದೆ ಕಡೆಯಿಂದ ಕುಡ್ತಮುಗೇರು ಕಡೆಗೆ ಬರುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ, ಲಾರಿಯಲ್ಲಿ ಕೆಂಪು ಕಲ್ಲು ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡು ಬಂದಿದೆ. ಕಲ್ಲುಗಳ ಸಾಗಾಟದ ಬಗ್ಗೆ ಲಾರಿ ಚಾಲಕ ಎನ್.ಸಿ.ಶರೀಪ್ (42) ಅವರಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ, ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡು ಬಂದಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿ ಚಾಲಕನನ್ನು ಹಾಗೂ ಲಾರಿಯನ್ನು ಲೋಡ್ ಸಮೇತ ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





