ಮಕ್ಕಳ ಮಾಸೋತ್ಸವ 2025ರ ಪೂರ್ವಭಾವಿ ಸಭೆ: ದ.ಕ ಜಿಲ್ಲಾ ಸಮಿತಿ ಸಂಚಾಲಕರಾಗಿ ರಫೀಕ್ ದರ್ಬೆ ಆಯ್ಕೆ
ಪುತ್ತೂರು: 2025ನೇ ಸಾಲಿನ ಮಕ್ಕಳ ಹಕ್ಕುಗಳ ಮಾಸೋತ್ಸವದ ಪೂರ್ವಭಾವಿ ಸಭೆ ಮತ್ತು ಕೆ.ಟಿ.ಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಸಭೆ ಮಂಗಳೂರು ಪಡಿ ಸಂಸ್ಥೆಯಲ್ಲಿ ಅ.16ರಂದು ನಡೆಯಿತು.

ಜಿಲ್ಲೆಯಾದ್ಯಂತ ಮೂರು ತಿಂಗಳು ಸರಣಿ ಕಾರ್ಯಕ್ರಮ ದೊಂದಿಗೆ ಆಯೋಜಿಸಲ್ಪಡುವ ಮಕ್ಕಳ ಹಕ್ಕುಗಳ ಮಾಸೋತ್ಸವವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಪಡಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜರವರು ಮಾಹಿತಿ ಕಾರ್ಯಗಾರ ನಡೆಸಿದರು. ಸಂಪನ್ಮೂಲ ವ್ಯಕ್ತಿ ಕಸ್ತೂರಿ ಬೊಳುವಾರುರವರು ಮಾಸೋತ್ಸವದ ಉದ್ದೇಶ ಹಾಗೂ ಅದರ ಜವಾಬ್ದಾರಿಯ ಕುರಿತು ಮಾಹಿತಿ ನೀಡಿದರು.
ಬಳಿಕ 2025-26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಜಿಲ್ಲಾ ಸಮಿತಿಯ ಸಂಚಾಲಕರಾಗಿ ಮುಹಮ್ಮದ್ ರಫೀಕ್ ದರ್ಬೆ ಹಾಗೂ ಸಹ ಸಂಚಾಲಕರಾಗಿ ಪುತ್ತೂರು ಸಮಿತಿಗೆ ಸುಮಂಗಲ ಶೆಣೈ ಹಾಗೂ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ಸುಳ್ಯ ತಾಲೂಕಿನ ಪದಾಧಿಕಾರಿಗಳನ್ನು ಆಯಾ ತಾಲೂಕಿನ ಸಹ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.



