ಬಂಟ್ವಾಳ: ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ 22ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2,20,000 ರೂ. ಮೌಲ್ಯದ ಒಣ ಅಡಿಕೆ ಕಳ್ಳತನ ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿದ್ದಾರೆ.

ಒಣ ಅಡಿಕೆ ಕಳವಿನ ಬಗ್ಗೆ ಜುಲೈ 23ರಂದು ಅಕ್ರ 112/2025 ಕಲಂ 306, ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಜುಲೈ 28 ರಂದು ಆರೋಪಿಗಳಲ್ಲಿ ಓರ್ವನಾದ ಸುಳ್ಯ ಪೈಚಾರು ಗ್ರಾಮ ನಿವಾಸಿ ಸತೀಶ್ (29 ವರ್ಷ) ಎಂಬಾತನನ್ನು ವಶಕ್ಕೆ ಪಡೆದು ಕಳವುಗೈದ 74,000 ರೂ. ಮೌಲ್ಯದ 15 ಚೀಲ ಒಣ ಅಡಿಕೆ, ಕಳವು ಅಡಿಕೆಯನ್ನು ಮಾರಾಟ ಮಾಡಿದ 70,000 ರೂ. ಹಣವನ್ನು (ಒಟ್ಟು ಮೌಲ್ಯ 1,44,000 ರೂ.) ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಯು ಕೃತ್ಯಕ್ಕೆ ಬಳಸಿದ ಆಪೆ ಗೂಡ್ಸ್ ಅಂದಾಜು ಮೌಲ್ಯ 80,000 ರೂ. ಆಗಿದ್ದು ಒಟ್ಟು 2,24,000 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆಪಡೆಯಲಾಗಿದೆ. ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಕಳವು ಪ್ರಕರಣ ಪತ್ತೆ ಕಾರ್ಯಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ.ರವರ ನೇತೃತ್ವದಲ್ಲಿ, ಮಂಜುನಾಥ್ ಟಿ. ಪೊಲೀಸ್ ಉಪ ನಿರೀಕ್ಷಕರು, ಬಂಟ್ವಾಳ ಗ್ರಾಮಾಂತರ ಠಾಣೆ, ಎ.ಎಸ್.ಐ. ಜಿನ್ನಪ್ಪ ಗೌಡ, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ ಪೊಲೀಸ್ ಕಾನ್ಸಟೇಬಲ್ಗಳಾದ ಮಾರುತಿ, ಹನುಮಂತ ರವರುಗಳನ್ನು ಒಳಗೊಂಡ ತನಿಖಾ ತಂಡವು ತನಿಖೆ ನಡೆಸಿದೆ.





