ಪುತ್ತೂರು| ಸಂತ್ರಸ್ತೆಯ ಮನೆಗೆ ಮಂಗಳೂರಿನ ಮಹಿಳಾ ಸಂಘಟನೆಗಳ ನಿಯೋಗ ಭೇಟಿ
ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೆ ಒಳಗಾಗಿರುವ ಪುತ್ತೂರಿನ ವಿದ್ಯಾರ್ಥಿನಿ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು.

ಮದುವೆಯಾಗುವ ಭರವಸೆ ನೀಡಿ, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ತಕ್ಷಣ ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಮಹಿಳಾ ನಾಯಕರು ಈ ಸಂದರ್ಭ ಆಗ್ರಹಿಸಿದರು. ಈ ಕುರಿತು ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜೊತೆ ಸೇರಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಯೋಗ ಎಚ್ಚರಿಸಿತು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ವಿದ್ಯಾ ಶೆಣೈ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ನ್ಯಾಯವಾದಿ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿ ಸೋಜಾ, ಪ್ರಮೀಳಾ ದೇವಾಡಿಗ, ಪ್ಲೇವಿ ಕ್ರಾಸ್ತಾ ನಿಯೋಗದಲ್ಲಿ ಇದ್ದರು.