ಹುಲಿ ಮತ್ತು ನಾಲ್ಕು ಹುಲಿ ಮರಿಗಳು ವಿಷ ಪ್ರಾಷಣದಿಂದ ಸಾವನ್ನಪ್ಪಿರುವ ಶಂಕೆ
ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನ ಮೂಡಿದ್ದು ಅದಕ್ಕೆ ಪೂರಕವೆಂಬಂತೆ ಶುಕ್ರವಾರ ಹಸುವಿನ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನವನ್ನು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ಹುಲಿಗಳು ಗುರುವಾರ ಈ ಕಾಡಿನಲ್ಲಿ ಸತ್ತಿವೆ. ದುಷ್ಕರ್ಮಿಗಳು ಹಸುವಿನ ಮಾಂಸಕ್ಕೆ ವಿಷಪ್ರಾಶನ ಮಾಡಿ, ಅದನ್ನು ತಿಂದ ನಂತರ ಹುಲಿ ಮತ್ತು ಅದರ ಮರಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಕಾಡಿನಲ್ಲಿ ಬಿಡುವ ಮೊದಲು ಹಸುವಿಗೆ ವಿಷಪ್ರಾಶನ ಮಾಡಿಸಿರಬಹುದೇ ಅಥವಾ ಸತ್ತ ಹಸುವಿನ ಮೇಲೆ ವಿಷಪ್ರಾಶನ ಮಾಡಿರಬಹುದೇ ಎನ್ನುವ ಸಂಶಯ ಮೂಡಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಇದೇ ಅನುಮಾನ ವ್ಯಕ್ತ ಪಡಿಸಿದ್ದಾರೆ. ಯಾರೋ ದನಗಳಿಗೆ ವಿಷಪ್ರಾಶನ ಮಾಡಿದ್ದಾರೆ, ಇದುರಿಂದಲೇ ಹುಲಿಗಳ ಸಾವು ಆಗಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ನಾವು ಅದನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡುತ್ತೇವೆ. ಇದರ ಹಿಂದಿರುವವರಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಖಂಡ್ರೆ ತಿಳಿಸಿದ್ದಾರೆ