ಲಕ್ಷಾಂತರ ರೂ ವಂಚನೆ; ಅಡಿಕೆ ವ್ಯಾಪಾರಿ ನೌಫಲ್ ವಿರುದ್ಧ ದೂರು
ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆಯಲ್ಲಿ ಎ.ಬಿ ಸುಪಾರಿ ಅಂಗಡಿಯನ್ನು ಹೊಂದಿರುವ ನಾವೂರು ಮೈಂದಾಳ ನಿವಾಸಿ ನೌಫಾಲ್ ಎಂಬಾತ ಕೃಷಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಇದೀಗ ಮೋಸ ಹೋದ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.

ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದ ನೌಫಾಲ್ ಜೊತೆಗೆ ಇಲ್ಲಿನ ಕೃಷಿಕರು ಅನೇಕ ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದು ಒಣ ಅಡಿಕೆ, ಕರಿ ಮೆಣಸು ನೀಡುತ್ತಿದ್ದರು ಎನ್ನಲಾಗಿದೆ. ಈವರೆಗೂ ತನ್ನ ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿದ್ದು ಕೃಷಿಕರ ಮನ ಗೆದ್ದಿದ್ದ. ಕೃಷಿಕರಿಗೆ ಅಗತ್ಯಕ್ಕೆ ತಕ್ಕಂತೆ ಹಣವೂ ನೀಡುತ್ತಿದ್ದ ಎನ್ನಲಾಗಿದೆ.

ಆದರೆ ಇದೀಗ ಏಕಾಏಕಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಂಗಡಿಗೆ ಬೀಗ ಹಾಕಿ ಪರಾರಿಯಾಗಿದ್ದು ಸ್ಥಳೀಯ ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಒಬ್ಬೊಬ್ಬ ಕೃಷಿಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳದ ಪ್ರವೀಣ್ ಡಿಸೋಜ ಎಂಬವರು ಇದೀಗ ಪೊಲೀಸ್ ದೂರು ನೀಡಿದ್ದು ನಾನು ಮಾ.3ರಂದು ನೌಫಲ್ ಮಹಮ್ಮದ್ ಅವರ ಎಬಿ ಸುಪಾರಿ ಅಂಗಡಿಗೆ ಸುಮಾರು 6.5 ಕ್ವಿಂಟಾಲ್ ಅಡಿಕೆ ಮಾರಾಟ ಮಾಡಿದ್ದು ಅದರ 3,50,000 ರೂ ಹಣವನ್ನು ಅವರು ನನಗೆ ನೀಡಿಲ್ಲ, ಜೂ.9ರಂದು ನೌಫಲ್ ನನಗೆ ಮೆಸೇಜ್ ಕಳಿಸಿ “ನಾನು ನಷ್ಟದಲ್ಲಿದ್ದು ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್ ಕಳುಹಿಸಿದ್ದಾರೆ, ಇದರಿಂದ ಗಾಬರಿಗೊಂಡ ನಾನು ಜೂನ್ 10 ರಂದು ಬೆಳಿಗ್ಗೆ ನೌಫಲ್ ಅಂಗಡಿಗೆ ಹೋಗಿ ನೋಡಿದಾಗ ಅಂಗಡಿಗೆ ಬೀಗ ಹಾಕಿದ್ದು ಮನೆಗೂ ಬೀಗ ಹಾಕಲಾಗಿದೆ, ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದವರಿ 24 ಮಂದಿ ನೌಫಲ್ ಅವರ ಅಂಗಡಿಯ ಮುಂದೆ ಜಮಾಯಿಸಿದ್ದು ಒಟ್ಟು 94,77,810 ರೂ ವಂಚಿಸಿರುವುದಾಗಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ