ಕರಾವಳಿ

ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ ವಿಚಾರ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದೇನು?

ಪುತ್ತೂರು: ಬಂಟ್ವಾಳ ಕೊಳತ್ತಮಜಲಿನ ಯುವಕ ರಹಿಮಾನ್ ಹತ್ಯೆ ಪ್ರಕರಣದ ವಿಚಾರವಾಗಿ ‘ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ’ ವಿಚಾರ ವೈರಲ್ ಆಗುತ್ತಿದ್ದು, ಈ ಬಗ್ಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ ಸ್ಪಷ್ಟನೆ ನೀಡಿದ್ದಾರೆ.


ಈ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜೀನಾಮೆ ನೀಡುತ್ತಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಷ್ಟೇ ಬರ್ತಿದೆ ಅಷ್ಟೇ. ನಮ್ಮ ಗಮನಕ್ಕೆ ಬಂದಿಲ್ಲ, ಜಾತ್ಯತೀತ ಪಕ್ಷವಾದ ನಾವು ಎಂದಿಗೂ ಮುಸ್ಲಿಂ ಸಮುದಾಯದ ಜೊತೆಗೆ ಇದ್ದೇವೆ. ಅವರ ಸಾವು-ನೋವುಗಳಿಗೆ ಕಷ್ಟಗಳಿಗೆ ಬ್ಲಾಕ್ ಕಾಂಗ್ರೆಸ್ ಪುತ್ತೂರಿನ ಶಾಸಕರ ಜೊತೆ ಸೇರಿ ಅವರ ಜೊತೆಗಿದ್ದೇವೆ. ಅವರ ಮನವೊಲಿಸಿ ರಾಜೀನಾಮೆ ಇಲ್ಲದ ಹಾಗೇ ನೋಡಿಕೊಳ್ಳುತ್ತೇವೆ ಎಂದರು.

ರಹಿಮಾನ್ ಹತ್ಯೆಗೆ ಸರಕಾರದ ವೈಫಲ್ಯ ಕಾರಣವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ಮಟ್ಟದಲ್ಲಿ ನಾವು ಮಾತನಾಡುವ ಹಾಗಿಲ್ಲ. ಅದು ಹೈಕಮಾಂಡ್ನವರು ಮಾತನಾಡುತ್ತಾರೆ.
ಈ ಕೊಲೆಯ ಹಿಂದೆ ಯಾವುದೇ ರೀತಿಯಲ್ಲಿ ಸರಕಾರದ ವೈಫಲ್ಯ ಇಲ್ಲ. ಕಾನೂನು ರೀತಿಯಲ್ಲಿ ಕ್ರಮ ನಿರ್ವಹಿಸಲಿದ್ದಾರೆ ಎಂದರು. ಇನ್ನು ಸರಕಾರದ ವೈಫಲ್ಯದ ಬಗ್ಗೆ ನಡೆಸಿರುವ ಪತ್ರಿಕಾಗೋಷ್ಠಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುದ್ದಿಗೋಷ್ಠಿ ನಡೆಸಿರುವ ಮಾಹಿತಿ ಇಲ್ಲ, ವಿಚಾರ ಮಾಡುತ್ತೇವೆ. ಈ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಸಿ ಯಾವ ತೀರ್ಮಾನ ಕೈಗೊಳ್ಳಬೇಕೋ ಕೈಗೊಳ್ತವೆ. ಕಾರ್ಯಕರ್ತರ ಜೊತೆಗೆ ನಾವಿದ್ದೇವೆ, ಅವರನ್ನು ಸಮಾಧಾನಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!