ಕರಾವಳಿ

ಪ್ರಕಾಶ್ ಪುರುಷರಕಟ್ಟೆಯವರ ಮೃತದೇಹ ಮೆರವಣಿಗೆ



ಪುತ್ತೂರು: ನಿನ್ನೆ (ಜೂ.11ರಂದು) ಹೃದಯಾಘಾತದಿಂದ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ, ಉದ್ಯಮಿ ಪ್ರಕಾಶ್ ಪುರುಷರಕಟ್ಟೆ ಅವರ ಮೃತದೇಹದ ಅಂತಿಮ ಯಾತ್ರೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಪುರುಷರಕಟ್ಟೆಯ ಪ್ರಕಾಶ್ ಅವರ ಮನೆ ವರೆಗೆ ನಡೆಯಿತು. ಆಂಬ್ಯುಲೆನ್ಸ್‌ನಲ್ಲಿ ಮೂಲಕ ಮೃತದೇಹವನ್ನು ಕೊಂಡೊಯ್ಯಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಪುತ್ತೂರು ಗಾಂಧಿ ಕಟ್ಟೆ ಬಳಿ, ಎಪಿಎಂಸಿ ಕಾಂಗ್ರೆಸ್ ಕಚೇರಿ ಬಳಿ, ದರ್ಬೆಯಲ್ಲಿ ಮುಕ್ವೆಯಲ್ಲಿ ಹಾಗೂ ಪುರುಷರಕಟ್ಟೆ ಜಂಕ್ಷನ್‌ನಲ್ಲಿ ಸೇರಿದ್ದ ಜನರಿಗೆ ಮೃತದೇಹವನ್ನು ನೋಡಲು ಅವಕಾಶ ಮಾಡಿಕೊಡಲಾಯಿತು. ಪುತ್ತೂರಿನಿಂದ ಹೊರಟ ಪ್ರಕಾಶ್ ಅವರ ಅಂತಿಮ ಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಮೃತದೇಹ ಪುರುಷರಕಟ್ಟೆಯ ಮನೆಗೆ ತಲುಪುತ್ತಿದ್ದಂತೆ ಮನೆ ಬಳಿ ನೂರಾರು ಮಂದಿ ಸೇರಿದ್ದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಮುಂಚೂಣಿಯಲ್ಲಿ ನಿಂತು ಎಲ್ಲ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಸಹಿತ ಸಾವಿರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಪ್ರಕಾಶ್ ಅವರ ಆಪ್ತರು, ಸ್ನೇಹಿತರು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂತು. ಸ್ಥಳೀಯವಾಗಿ ಎಲ್ಲರೊಂದಿಗೆ ಆತ್ಮೀಯ ಒಡನಾಟವನ್ನು ಇಟ್ಟುಕೊಂಡಿದ್ದ ಪ್ರಕಾಶ್ ಅವರ ಅಗಲುವಿಕೆಗೆ ಊರಿಗೆ ಊರೇ ಬೇಸರ ವ್ಯಕ್ತಪಡಿಸುತ್ತಿತ್ತು. ಪುರುಷರಕಟ್ಟೆಯ ಬಂಗಾರದಂತ ವ್ಯಕ್ತಿಯನ್ನು ಕಳೆದುಕೊಂಡೆವು ಎಂದು ಸೇರಿದವರು ಮಾತನಾಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!