ಕರಾವಳಿ

ಉಪ್ಪಿನಂಗಡಿ: ಹುಳ ಇದ್ದ ಚಿಕನ್ ಖಾದ್ಯ ನೀಡಿದ ಆರೋಪ- ಹೋಟೆಲ್ ನ್ನು ಮುಚ್ಚಿಸಿದ ಅಧಿಕಾರಿಗಳು

ಉಪ್ಪಿನಂಗಡಿ: ಗ್ರಾಹಕರಿಗೆ ಹುಳವಿದ್ದ ಚಿಕನ್ ಖಾದ್ಯವನ್ನು ನೀಡಿದ್ದಾರೆಂಬ ಆರೋಪದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಹೊಟೇಲನ್ನು ಮುಚ್ಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಇಲ್ಲಿನ ಹಳೇ ಬಸ್ ನಿಲ್ದಾಣದ ಸಮೀಪದ ಮಾಂಸಾಹಾರಿ ಹೊಟೇಲೊಂದರಲ್ಲಿ ಗ್ರಾಹಕನಾಗಿ ಹೋಗಿದ್ದ ವೇಳೆ ನೀಡಲಾದ ಚಿಕನ್ ಫ್ರೈಯಲ್ಲಿ ಹುಳ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ವಿಚಾರ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳ ತಂಡ ಭೇಟಿ ನೀಡಿ ಶೋಧನೆ ನಡೆಸಲು ನಿರ್ದೇಶನ ನೀಡಿತು.

ನಂತರ ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ, ಉಪ ತಹಶೀಲ್ದಾರ್ ಚೆನ್ನಪ್ಪಗೌಡ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪೊಲೀಸ್ ಸಬ್‌ಇನ್‌ಸ್ಪೆೆಕ್ಟರ್ ರಾಜೇಶ್ ಕೆ.ವಿ., ವಿಎ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿ ಯತೀಶ್ ಮಡಿವಾಳ್, ಮತ್ತಿತರನ್ನು ಒಳಗೊಂಡ ಅಧಿಕಾರಿಗಳ ತಂಡ ಜ.12ರಂದು ರಾತ್ರಿ ಡಿಢೀರ್ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿದರು. ಮಾಂಸ ಸಂಗ್ರಹಣಾ ಫ್ರಿಡ್ಜ್‌ಗಳನ್ನು ಪರಿಶೀಲನೆ ನಡೆಸಿ ಕೆಲವೊಂದು ಖಾದ್ಯಗಳ ಸ್ಯಾಂಪಲ್ ಗಳನ್ನು ಪರೀಕ್ಷಾಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ..

ಈ ವೇಳೆ ಹೋಟೇಲ್ ಉದ್ಯಮಕ್ಕೆ ಸಂಬಂಧಿಸಿ ಪಂಚಾಯತ್ ಪರವಾನಿಗೆ, ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಹೊಂದದೇ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹೊಟೇಲನ್ನು ಮುಚ್ಚಿಸಲು ನಿರ್ದೇಶನ ನೀಡಿದರು. ಅದರಂತೆ ಅಧಿಕಾರಿಗಳು ಹೊಟೇಲನ್ನು ಬಂದ್ ಮಾಡಿಸಿದರು.
ದಾಳಿ ವೇಳೆ ಸ್ಥಳೀಯ ಪೊಲೀಸರು ಬಂದೋ ಬಸ್ತು ಕೈಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!