ಪುತ್ತೂರು: ಹಿಂದುತ್ವ ಎನ್ನುವುದು ಕುತ್ತಿಗೆಯ ಶಾಲಿನಲ್ಲಿ, ಹಣೆಯ ತಿಲಕದಲ್ಲಿ ಅಲ್ಲ -ಅನಂತ ಕುಮಾರ್ ಹೆಗಡೆ
ಪುತ್ತೂರು: ಹಿಂದುತ್ವ ಎನ್ನುವುದು ಕುತ್ತಿಗೆಯಲ್ಲಿ ಹಾಕುವ ಶಾಲಿನಲ್ಲಿ ಮತ್ತು ಹಣೆಯಲ್ಲಿರುವ ತಿಲಕದಲ್ಲಿ ಕಾಣಬಾರದು. ಬದಲಾಗಿ ನಮ್ಮ ಬದುಕಿನಲ್ಲಿ ಕಾಣಬೇಕು, ನಾಲಿಗೆ, ವಿಚಾರದಲ್ಲಿ ಕಾಣಬೇಕು. ಅದುವೇ ನಿಜವಾದ ಹಿಂದುತ್ವ ಎಂದು ಮಾಜಿ ಸಚಿವ, ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಳಗೊಂದು ಹೊರಗೊಂದು ಹಿಂದುತ್ವ ಇದ್ದರೆ ಅದು ನಿಜವಾದ ಹಿಂದುತ್ವ ಅಲ್ಲ. ಜಾತಿಯ ಗೂಡಿನಿಂದ ಹೊರಬರಲಾಗದವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ಹಿಂದುತ್ವ ಎಂದರೆ ಭಾಷಣದ ಸರಕಲ್ಲ, ಅದೊಂದು ಬದುಕು ಎಂದು ಅವರು ಹೇಳಿದರು.
ಹಿಂದುತ್ವ, ಆಡಂಬರವನ್ನು ಒಪ್ಪುವುದಿಲ್ಲ ಎಂದ ಅವರು ಹಿಂದುತ್ವ ಎಂದರೆ ಏನು ಎಂಬುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.
ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು.



