‘ರಸ್ತೆ ವಿಷಯ ಬಿಟ್ಟು ಲವ್ ಜಿಹಾದ್ ಬಗ್ಗೆ ಆಲೋಚಿಸಿ’ ನಳಿನ್ ಕುಮಾರ್ ಹೇಳಿಕೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಖಂಡನೆ
ಪುತ್ತೂರು: ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಚರಂಡಿ, ರಸ್ತೆ ದುರಸ್ತಿಯಂತಹ ಸಾಧಾರಣ ವಿಷಯಗಳ ಕಡೆ ಗಮನಕೊಡದೆ ಲವ್ ಜಿಹಾದ್ ನಂತಹ ವಿಷಯಗಳನ್ನು ಮಾತನಾಡಬೇಕು ಎಂಬ ಹೇಳಿಕೆಗೆ ನೀಡಿರುವುದು ಖಂಡನೀಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಿದ್ಧಗೊಂಡಿದ್ದು, ಅವರಿಗೆ ಅಭಿವೃದ್ಧಿ ವಿಚಾರ ಬೇಡ, ಬದಲಾಗಿ ಲವ್ ಜಿಹಾದ್ ನಂತಹ ವಿಚಾರಗಳನ್ನು ಯುವಕರ ತಲೆಗೆ ತುಂಬಿ ಚುನಾವಣೆಯನ್ನು ಗೆಲ್ಲಬಹುದೆಂದು ಅವರು ಅಂದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಬಾರದೆಂದು ಇತ್ತೀಚೆಗೆ ಸಚಿವ ಆರಗ ಜ್ಞಾನೇಂದ್ರ ಅವರು ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಹೇಳಿಕೆಯನ್ನೂ ಖಂಡಿಸಿದ ರೈಯವರು ‘ಅಡಿಕೆ ಈ ಭಾಗದ ಜನರ ಜೀವನಾಡಿ, ಅಡಿಕೆ ಬೆಳೆ ಇಲ್ಲದೇ ಈ ಭಾಗದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಅದು ಎಲ್ಲಿ ಬೆಳೆಯುತ್ತದೆ ಎಂದು ಇವರಿಂದ ತಿಳಿಯಬೇಕಾಗಿಲ್ಲ, ಹಾಗೆ ಕೇಳಿದರೆ ‘ಎಲ್ಲಿಂದ ಊಟ ಮಾಡಬೇಕು’ ಎಂದು ಕೇಳಿದಂತೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.